ಜನ್ಮಜಾತ ರೋಗ ನಿರೋಧಕ ಅಸ್ವಸ್ಥತೆ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ಆಸ್ಟರ್ ಆಸ್ಪತ್ರೆಯಿಂದ ಯಶಸ್ವಿ ಚಿಕಿತ್ಸೆ
ಬೆಂಗಳೂರು: ಆಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರ ತಂಡವು ಐದು ಕೆಜಿಗಿಂತ ಕಡಿಮೆ ತೂಕದ 5 ತಿಂಗಳ ಶಿಶುವಿಗೆ ತಗುಲಿದ್ದ ಅಪರೂಪದ ಜನ್ಮಜಾತ ರೋಗ ನಿರೋಧಕ ಅಸ್ವಸ್ಥತೆ ಅಂದರೆ ಲ್ಯುಕೋಸೈಟ್ ಎಡ್ಹೆಷನ್ ಡೆಫಿಷಿಯನ್ಸಿ(ಎಲ್ಎಡಿ) ಕಾಯಿಲೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಸಲಹಾ ತಜ್ಞ ಡಾ.ಪಿ. ಅನೂಪ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ಲಕ್ಷ ಜನರ ಪೈಕಿ ಅಪರೂಪದ ಅನುವಂಶಿಕ ಕಾಯಿಲೆಯಾಗಿರುವ ರೋಗ ನಿರೋಧಕ ಶಕ್ತಿಯ ಕೊರತೆ ಉಂಟು ಮಾಡುವ ಎಲ್ಎಡಿ ಕಾಯಿಲೆಯು 5 ತಿಂಗಳ 5 ಕೆಜಿಯ ಶಿಶುವಿನಲ್ಲಿ ಕಂಡು ಬಂದಿತ್ತು. ಗರ್ಭಿಣಿಯೊಬ್ಬರ ಹೊಟ್ಟೆಯಲ್ಲಿದ್ದ ಈ ಶಿಶುವಿಗೆ ಚಿಕಿತ್ಸೆ ನೀಡಬೇಕಿರುವುದನ್ನು ಅರಿತ ಆಸ್ಪತ್ರೆ ವೈದ್ಯರ ತಂಡವು ಚಿಕಿತ್ಸೆಗೆ ಸಿದ್ದತೆ ನಡೆಸಿತ್ತು ಎಂದರು.
ಮಹಿಳೆಯ ದೇಹದಲ್ಲಿ ಬಿಳಿರಕ್ತದ ಕಣ ಬದಲಾಯಿಸುವುದು ಸವಾಲಾಗಿತ್ತು. ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟೇಶನ್(ಬಿಎಂಟಿ) ಮೂಲಕ ಚಿಕಿತ್ಸೆ ನೀಡಲಾಯಿತು. ಯಶಸ್ವಿ ಚಿಕಿತ್ಸೆ ನೀಡಿದ ನಂತರ ಕೆಲಸ ಮಾಡುವ ಬಿಳಿರಕ್ತದ ಕಣ ಮಹಿಳೆಯ ದೇಹದಲ್ಲಿ ಉತ್ಪತ್ತಿಯಾಗಿ ಸೋಂಕುಗಳನ್ನು ತಡೆಗಟ್ಟುವಂತೆ ಮಾಡಿದೆ ಎಂದು ಅವರು ವಿವರಿಸಿದರು.
ಆಸ್ಪತ್ರೆಯ ಸಿಇಓ ಎಸ್. ರಮೇಶ್ ಕುಮಾರ್ ಮಾತನಾಡಿ, 5 ತಿಂಗಳ ಶಿಶುವಿಗೆ ಯಶಸ್ವಿ ಚಿಕಿತ್ಸೆ ನಡೆಸಿದ ನಮ್ಮ ವೈದ್ಯರ ಬಗ್ಗೆ ಹೆಮ್ಮೆಪಡುತ್ತೇವೆ. ಸಮಯಕ್ಕೆ ಸರಿಯಾಗಿ ಬಿಎಂಟಿ ಚಿಕಿತ್ಸೆ ನೀಡಿದರೆ ರೋಗಿಗಳು ಆರೋಗ್ಯಕರ ಹಾಗೂ ಸಾಮಾನ್ಯ ಜೀವನ ನಡೆಸಬಹುದು ಎಂದರು.
ಚಿಕಿತ್ಸೆ ಪಡೆದ ಮಗುವಿನ ತಂದೆ ಬಂಡೆಶ ಮಾತನಾಡಿ, ನಮ್ಮ ಮಗುವಿಗೆ ಆಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರ ತಂಡವು ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. ನಮ್ಮ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಿ, ಮಗುವಿನ ಚೇತರಿಕೆಗೆ ಸಹಕಾರಿಯಾಗಿದೆ. ನಮ್ಮ ಮಗು ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಕಾರಣಕರ್ತರಾದ ಆಸ್ಪತ್ರೆ ವೈದ್ಯರ ಕಾಳಜಿಗಾಗಿ ನಾವು ಋಣಿಯಾಗಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಹಿರಿಯ ಸಲಹೆಗಾರರಾದ ಡಾ.ಸ್ಟಾಲಿನ್ ರಾಮ್ ಪ್ರಕಾಶ್, ಡಾ.ಸಿ.ಪಿ. ರಘುರಾಮ್, ಸಂಧಿವಾತ ಶಾಸ್ತ್ರದ ಸಲಹೆಗಾರ ಡಾ.ಸಾಗರ್ ಭಟ್ಟಡ್ ಮತ್ತಿತರರು ಉಪಸ್ಥಿತರಿದ್ದರು.