ಮಧುಕರ ಶೆಟ್ಟಿ ಅವರನ್ನು ಸಮಾಜ ಸೂಕ್ತ ರೀತಿಯಲ್ಲಿ ಗುರುತಿಸಲಿಲ್ಲ : ಅಬ್ದುಲ್ ಅಹದ್

ಬೆಂಗಳೂರು, ಮೇ 14 : ‘ಖಾಕಿಯೊಳಗಿನ ಸಂತ’ ನಾಟಕವು ಡಾ.ಕೆ.ಮಧುಕರ್ ಶೆಟ್ಟಿ ಎಂಬ ಸಜ್ಜನ ವ್ಯಕ್ತಿಯ ಜೀವನಾಧಾರಿತವಾಗಿದೆ. ಒಬ್ಬ ಮಹಾನ್ ವ್ಯಕ್ತಿಯ ಜೀವನಾಧಾರಿತ ನಾಟಕ ಕಲಾಲೋಕಕ್ಕೆ ಬಂದಿರುವುದು ಸಂತೋಷದ ಸಂಗತಿ. ಮಧುಕರ ಶೆಟ್ಟಿ ಅವರನ್ನು ಸಮಾಜ ಸೂಕ್ತ ರೀತಿಯಲ್ಲಿ ಗುರುತಿಸಲಿಲ್ಲ’ ಎಂದು ಡಿಐಜಿಪಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಭದ್ರತಾ-ಜಾಗೃತಿ ನಿರ್ದೇಶಕ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಗುರುವಾರ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾಂಸ್ಕೃತಿಕ ಕಲಾ ಕುಟೀರದ ವತಿಯಿಂದ ಆಯೋಜಿಸಿದ್ದ ‘ಆಕ್ಸಿಡೆಂಟ್’ ಕಿರುಚಿತ್ರ ಬಿಡುಗಡೆ ಹಾಗೂ ಡಾ.ಮಧುಕರ ಶೆಟ್ಟಿ ಅವರ ಜೀವನಗಾಥೆ ಕುರಿತ ‘ಖಾಕಿಯೊಳಗಿನ ಸಂತ ನಾಟಕ’ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಕೆ.ಮಧುಕರ್ ಶೆಟ್ಟಿ ಅವರು ಕೂಡ ತಮ್ಮನ್ನು ಗುರುತಿಸಬೇಕು ಎಂದೂ ಬಯಸಿರಲಿಲ್ಲ. ಆದರೆ ಇವತ್ತು ಮಧುಕರ್ ಶೆಟ್ಟಿ ಅವರ ಜೀವನದ ಕುರಿತ ನಾಟಕ ಬಂದಿರುವುದು ಶಾಶ್ವತವಾಗಿ ಮುಂದಿನ ಪೀಳಿಗೆಗೆ ಉಳಿಯುತ್ತದೆ. ಒಬ್ಬ ಪೊಲೀಸ್ ಅಧಿಕಾರಿಯಾಗಿ ಅವರ ತಮ್ಮ ಇತಿ-ಮಿತಿಗಳನ್ನು ಮೀರಿ ಬೆಳೆದವರು. ಅವರನ್ನು ಯಾರು ನೋಡಿದ್ದರೋ, ಯಾರು ಅವರ ಪ್ರಭಾವಕ್ಕೆ ಒಳಗಾಗಿದ್ದರೋ ಎಲ್ಲರಿಗೂ ಅವರ ಮನಸ್ಸಿನಲ್ಲಿ ಒಂದು ಛಾಪನ್ನು ಮೂಡಿಸಿದ್ದಾರೆ ಎಂದು ಅಬ್ದುಲ್ ಅಹದ್ ನುಡಿದರು.
ಹಿಂದೆ ಯಾರು ಸಮಾಜಕ್ಕಾಗಿ ದುಡಿದಿದ್ದಾರೋ, ಜನರಿಗಾಗಿ ಪ್ರಾಣ ಕೊಟ್ಟಿದ್ದಾರೋ, ಅಂತವರನ್ನು ಜನರು ಲಾವಣಿ, ಕಥೆ, ಜನಪದ ಕಥೆಗಳ ಮೂಲಕ ಜೀವಂತವಾಗಿಟ್ಟಿದ್ದಾರೆ. ಮಧುಕರ್ ಶೆಟ್ಟಿ ಅವರು ಮರಣ ಹೊಂದಿ ಸುಮಾರು ವರ್ಷಗಳೇ ಕಳೆದಿವೆ. ಆದರೆ ಇವತ್ತು ಅವರ ಜೀವನ ಆಧಾರಿತ ನಾಟಕದ ರೂಪದಲ್ಲಿ ಬರುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಅಬ್ದುಲ್ ಅಹದ್ ಮೆಚ್ಚುಗೆ ವ್ಯಕ್ತಪಡಿಸಿದರು.
ಖಾಕಿಯೊಳಗಿನ ಸಂತ ನಾಟಕ ಕನ್ನಡ ಭಾಷೆ, ಸಂಸ್ಕೃತಿ, ಮತ್ತು ಸಮಸ್ತ ಕನ್ನಡದ ಜನರಿಗೆ ದೊಡ್ಡ ಕೊಡುಗೆಯಾಗಿದೆ. ‘ಆಕ್ಸಿಡೆಂಟ್’ ಕಿರುಚಿತ್ರವು ಒಂದು ಕಲಾ ರೂಪಕವಾಗಿದೆ. ಅದರಲ್ಲಿ ಅಪಘಾತದಿಂದ ಯಾವ ರೀತಿ ಪರಿಣಾಮವಾಗುತ್ತದೆ ಎನ್ನುವುದನ್ನು ತಿಳಿಸಲಾಗಿದೆ ಎಂದು ಅಬ್ದುಲ್ ಅಹದ್ ಇದೇ ವೇಳೆ ತಿಳಿಸಿದರು.
ಖಾಕಿಯೊಳಗಿನ ಸಂತ ಹಾಗೂ ಆಕ್ಸಿಡೆಂಟ್ ಕಿರುಚಿತ್ರದ ಕಲಾವಿದರೆಲ್ಲರೂ ಬಿಎಂಟಿಸಿಯಲ್ಲಿ ಕೆಲಸ ಮಾಡುವ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳೇ ಆಗಿದ್ದಾರೆ. ಅವರ ಶ್ರದ್ಧೆ, ಪ್ರತಿಭೆ, ಸೃಜನಶೀಲತೆಯನ್ನು ನೋಡಿದರೆ, ಯಾವ ವೃತ್ತಿಪರ ಕಲಾವಿದರಿಗಿಂತಲೂ ಕಡಿಮೆ ಇಲ್ಲ ಎಂದು ಅಬ್ದುಲ್ ಅಹದ್ ಅಭಿಪ್ರಾಯಪಟ್ಟರು.
ಪ್ರಶಸ್ತಿಗಳು ಅಧಿಕಾರಿಗಳ ಮಿತ್ರರಿಗೆ ಸಿಗುತ್ತವೆ ಎಂದು ಹಿರಿಯ ಪತ್ರಕರ್ತ ಪಿ.ಲಂಕೇಶ್ ಅವರು ಒಂದು ಕಡೆ ಬರೆದಿರುವುದನ್ನು ನಾನು ಓದಿದ್ದೆ, ನಾನು ಅಂತಹ ಪ್ರಶಸ್ತಿ ಕೊಡಿಸುವ ಅಧಿಕಾರಿಯಲ್ಲ. ನಿಜವಾದ ಕಲೆ ಎಲ್ಲಿದೆ, ಅದನ್ನು ಕಂಡು ಪ್ರೋತ್ಸಾಹಿಸುತ್ತೇನೆ ಎಂದು ಅಬ್ದುಲ್ ಅಹದ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಮಂಜುನಾಥ್, ರಾಮಮೂರ್ತಿ, ‘ಆಕ್ಸಿಡೆಂಟ್’ ಕಿರುಚಿತ್ರದ ನಿರ್ದೇಶಕ ಆಂಥೋಣಿ ವಿಕ್ರಂ, ‘ಖಾಕಿಯೊಳಗಿನ ಸಂತ’ ನಾಟಕದ ನಿರ್ದೇಶಕ ಸಿದ್ದರಾಮ ಕೊಪ್ಪರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






