ಬೆಂಗಳೂರು | ನೀರಿನ ಟ್ಯಾಂಕರ್ ಹರಿದು ಬಾಲಕಿ ಮೃತ್ಯು

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.15: ನೀರಿನ ಟ್ಯಾಂಕರ್ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಎಚ್ಎಎಲ್ನಲ್ಲಿ ಬುಧವಾರ ವರದಿಯಾಗಿದೆ.
ಕಲಬುರಗಿ ಮೂಲದ ದಂಪತಿಯ ಪುತ್ರಿ ಅನುಶ್ರೀ(9) ಸಾವನ್ನಪ್ಪಿದ ಬಾಲಕಿ ಎಂದು ಗುರುತಿಸಲಾಗಿದೆ. ಎಚ್ಎಎಲ್ ರಸ್ತೆಯ ಶಿವಲಿಂಗಯ್ಯ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಕಟ್ಟಡವೊಂದಕ್ಕೆ ನೀರು ಸರಬರಾಜು ಮಾಡುವ ಟ್ಯಾಂಕರ್ ಬಂದಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಆಟ ಆಡುತ್ತಿದ್ದ ಬಾಲಕಿಯನ್ನು ನೋಡದೆ ಟ್ಯಾಂಕರ್ ಚಾಲಕ ವಾಹನ ಚಲಾಯಿಸಿದ ಪರಿಣಾಮ ಕೆಳಗೆ ಬಿದ್ದ ಬಾಲಕಿ ಮೇಲೆ ಟ್ಯಾಂಕರ್ ಹರಿದು ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಸದ್ಯ ಬಾಲಕಿಯ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಲ್ಲಿನ ಜೀವನ್ ಭೀಮನಗರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಾನೂನು ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.
Next Story





