"ನಾನು ಜನರ ಬಗ್ಗೆ ಮಾತನಾಡುತ್ತಿದ್ದೇನೆ" : ಸೋನಮ್ ವಾಂಗ್ಚುಕ್ ಅವರ ಉಪವಾಸ ಮುಷ್ಕರದ ಪೋಸ್ಟರ್ ಹಂಚಿಕೊಂಡು ನಟ ಕಿಶೋರ್ ಕುಮಾರ್ ಹೇಳಿದ್ದೇನು?

ಬೆಂಗಳೂರು : ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಉಪವಾಸ ಮುಷ್ಕರ 15ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಬಹುಭಾಷಾ ನಟ ಕಿಶೋರ್ ಕುಮಾರ್ ಅವರು ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
NEET ಸಹಿತ ಪರೀಕ್ಷಾ ಅಕ್ರಮಗಳ ವಿರುದ್ಧ ಕೇಂದ್ರದ ವೈಫಲ್ಯವನ್ನು ಖಂಡಿಸಿ ಕಾಕ್ರೋಚ್ ಜನತಾ ಪಕ್ಷ ಹೊಸದಿಲ್ಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ಸ್ಥಳದಲ್ಲಿ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಮುಷ್ಕರವು 15ನೇ ದಿನವನ್ನು ಪ್ರವೇಶಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಅವರಿಗೆ ನಿಜವಾಗಿಯೂ ಕಾಳಜಿ ಇದೆಯೇ? 21 ಮಕ್ಕಳ ಸಾವು ಅವರ ಮೇಲೆ ಪರಿಣಾಮ ಬೀರದಿದ್ದಾಗ, ಸೋನಮ್ ವಾಂಗ್ಚುಕ್ ಮತ್ತು ಉಪವಾಸ ಮಾಡುತ್ತಿರುವ ಇತರರಿಗೆ ಏನಾಗುತ್ತದೆ ಎಂಬುದರ ಬಗ್ಗೆ ಅವರು ಕಾಳಜಿ ವಹಿಸುತ್ತಾರೆಯೇ? ಇಲ್ಲ!!! ಎಂದು ಕಿಶೋರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮಾತನಾಡುತ್ತಿರುವುದು ಆ ಫ್ಯಾಸಿಸ್ಟ್ ಮೂರ್ಖ ಮತ್ತು ಅವನ ಹೆಸರಿಗಷ್ಟೇ ಇರುವ ಮಂತ್ರಿಗಳ ಬಗೆಗಲ್ಲ, ಅದು ನಮಗೆಲ್ಲರಿಗೂ ತಿಳಿದದ್ದೇ ... ನಾನು ಜನರ ಬಗ್ಗೆ ಮಾತನಾಡುತ್ತಿದ್ದೇನೆ. ಎಷ್ಟೇ ಸಾವುಗಳು, ಕೊಲೆಗಳು ಅಥವಾ ಅತ್ಯಾಚಾರಗಳು ನಡೆದರೂ ಅವರಿಗೆ ಇನ್ನು ಮುಂದೆ ಏನಾದರೂ ಪರಿಣಾಮವಾಗುತ್ತದೆಯೇ? ಅವರ ಧರ್ಮಸುಖದ ದಿವ್ಯ ಮರೆವಿಗೆ ಎಂದಾದರೂ ಎಚ್ಚರವುಂಟೇ? ಎಂದು ಅವರು ಪ್ರಶ್ನಿಸಿದ್ದಾರೆ.






