Anekal | ಬೈಕ್ ಸಹಿತ ಸುಟ್ಟು ಕರಕಲಾದ ಯುವಕನ ಮೃತದೇಹ ಪತ್ತೆ: ಕೊಲೆ ಶಂಕೆ

ಬೆಂಗಳೂರು, ಜು.3: ಬೈಕ್ ಜೊತೆ ಯುವಕನೋರ್ವನ ಸುಟ್ಟು ಕರಕಲಾದ ಮೃತದೇಹ ಪತ್ತೆಯಾದ ಘಟನೆ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕ್ಕನಹಳ್ಳಿಯ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯ ರಸ್ತೆಯಲ್ಲಿ ಗುರುವಾರ ಸಂಜೆ ನಡೆದಿದೆ. ದುಷ್ಕರ್ಮಿಗಳು ಯುವಕನನ್ನು ಕೊಲೆಗೈದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಆಂಧ್ರ ಪ್ರದೇಶದ ಗುಂಟೂರು ಮೂಲದ ವಂಶೀ ಕೃಷ್ಣ (25) ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯ ರಸ್ತೆ ಬದಿಯಲ್ಲಿ ಬೆಂಕಿ ಕಂಡ ವಾಹನ ಸವಾರರು ಸ್ಥಳಕ್ಕೆ ತೆರಳಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಅವರು ತಕ್ಷಣ ಸರ್ಜಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ ವೇಳೆ ಬೈಕ್ ಜೊತೆ ಯುವಕನ ಅರ್ಧಂಬರ್ಧ ಸುಟ್ಟಿರುವ ಮೃತದೇಹ ಪತ್ತೆಯಾಗಿದೆ. ವಂಶೀ ಕೃಷ್ಣರನ್ನು ದುಷ್ಕರ್ಮಿಗಳು ಕೊಲೆಗೈದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಗುಂಟೂರು ಮೂಲದ ವಂಶೀಕೃಷ್ಣ ಅವರು ಇಲೆಕ್ಟ್ರಾನಿಕ್ ಸಿಟಿಯ ಡಿಪ್ಲೊಮಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದರು. ನಿನ್ನೆ ಸ್ನೇಹಿತ ಕರೆಯ ಹಿನ್ನೆಲೆಯಲ್ಲಿ ವಂಶೀಕೃಷ್ಣ ಬೈಕಿನಲ್ಲಿ ಇಲೆಕ್ಟ್ರಾನಿಕ್ ಸಿಟಿಗೆ ಆಗಮಿಸಿದ್ದರೆನ್ನಲಾಗಿದೆ. ರಾತ್ರಿ 7 ಗಂಟೆ ಸುಮಾರಿಗೆ ವಂಶೀಕೃಷ್ಣ ಬೈಕ್ ಸಮೇತ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನೆ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್ಪಿ ವೆಂಕಟೇಶ್ ಪ್ರಸನ್ನ, ಸರ್ಜಾಪುರ ಇನ್ ಸ್ಪೆಕ್ಟರ್ ಮಹೇಂದ್ರ ಕುಮಾರ್ ಕೆ.ಎಚ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






