ಪೌರ ಕಾರ್ಮಿಕರಿಗೆ ವಾರದಲ್ಲಿ ಒಂದು ದಿನ ರಜೆ ಘೋಷಣೆ
ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವಾರದಲ್ಲಿ ಪೂರ್ತಿ ಒಂದು ದಿನ ರಜೆ ಘೋಷಿಸಿ ರಾಜ್ಯ ಸರಕಾರ ಆದೇಶವನ್ನು ಹೊರಡಿಸಿದೆ.
ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಸ್ವಚ್ಛತಾ ಕಾರ್ಯಕ್ಕೆ ಈಗಾಗಲೇ ನೇಮಿಸಿರುವ ಸಿಬ್ಬಂದಿಗೆ ವಾರದ ರಜೆ ನೀಡುವ ಸಂದರ್ಭದಲ್ಲಿ ಬೇರೊಬ್ಬ ನೌಕರರನ್ನು ಸದರಿ ಕಾರ್ಯಕ್ಕೆ ನಿಯೋಜಿಸುವ ಮೇರೆಗೆ ರಜೆಯ ಅವಶ್ಯಕತೆಯಿರುವ ಪೌರಕಾರ್ಮಿಕರಿಗೆ ವಾರದಲ್ಲಿ ಒಂದು ದಿನ ರಜೆ ನೀಡಲು ಅವಕಾಶ ಕಲ್ಪಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಾರದ ರಜೆಯನ್ನು ನೌಕರರು ಅಥವಾ ಪೌರ ಕಾರ್ಮಿಕರ ಹಕ್ಕು ಎಂದು ಪರಿಗಣಿಸತಕ್ಕದ್ದಲ್ಲ ಹಾಗೂ ಒಂದು ವಾರದ ಒಂದು ರಜೆಯನ್ನು ಮುಂದಿನ ವಾರಕ್ಕೆ ಹಿಂಬಾಕಿ ಎಂದು ಪರಿಗಣಿಸಿ ಸತತವಾಗಿ ರಜೆ ಪಡೆಯಲು ಅವಕಾಶವಿರುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಕೃತಿ ವಿಕೋಪ, ಸ್ಥಳೀಯ ಜಾತ್ರೆ, ಸಭೆ ಸಮಾರಂಭಗಳ ವಿಶೇಷ ಸಂದರ್ಭದಲ್ಲಿ ವಾರದ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಒತ್ತಾಯಿಸುವಂತಿಲ್ಲ. ಹಾಗೂ ಈ ಸಂದರ್ಭದಲ್ಲಿ ವಾರದ ರಜೆ ನೀಡುವ ಅಧಿಕಾರ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿವೇಚನೆಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಜೆಯ ಮೇಲೆ ತೆರಳಿದ ನೌಕರರ, ಪೌರಕಾರ್ಮಿಕರ ವ್ಯಾಪ್ತಿಯ ಸೇರಿದ ಪ್ರದೇಶದ ಸ್ವಚ್ಛತಾ ಕಾರ್ಯವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸಕ್ಕೆ ಹಾಜರಿರುವ ಇತರ ಸಿಬ್ಬಂದಿಯಿಂದ ಸ್ವಚ್ಛಗೊಳಿಸಬೇಕೆಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಸೂಚಿಸಿದ್ದಾರೆ.