ಪತ್ರಕರ್ತರಿಗೆ ಕ್ಷೇಮಾಭಿವೃದ್ದಿ ನಿಧಿ ಮೀಸಲಿಡಲು ಸಿಎಂಗೆ ಮನವಿ
ಬೆಂಗಳೂರು: ಪತ್ರಕರ್ತರಿಗೆ ಪರಿಹಾರ ನೆರವನ್ನು ಬಿಡಿಬಿಡಿಯಾಗಿ ಕೊಡುವ ಬದಲು ಪತ್ರಕರ್ತರ ಆರೋಗ್ಯಕ್ಕಾಗಿ ಈ ಬಾರಿ ಬಜೆಟ್ನಲ್ಲಿ ಕನಿಷ್ಠ 5 ಕೋಟಿ ರೂ.ಗಳನ್ನು ಮೀಸಲಿಡಬೇಕು. ಆ ನಿಧಿ ಪತ್ರಕರ್ತರ ಆರೋಗ್ಯ ಮತ್ತು ಚಿಕಿತ್ಸಾ ವೆಚ್ಚಕ್ಕೆ ಮಾತ್ರ ಸೀಮಿತ ಮಾಡಬೇಕು ಎಂದು ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ಒತ್ತಾಯಿಸಿದೆ.
ಶನಿವಾರದಂದು ಸಿಎಂ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್(ರಿ)ನ ಪಧಾಧಿಕಾರಿಗಳು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ರಾಜ್ಯದಲ್ಲಿ ಪತ್ರಕರ್ತರಿಗೆ ಆರೋಗ್ಯ ಕರ್ನಾಟಕ ಕಾರ್ಡ್ ಇದೆ. ಆದರೆ, ಅದು ಹಲವಾರು ತಾಂತ್ರಿಕ ಸಮಸ್ಯೆ ಮತ್ತು ಇತರ ಕಾರಣಗಳಿಂದ ನಿಷ್ಕ್ರೀಯಗೊಂಡಿದೆ. ಈಗಾಗಲೇ ವಾರ್ತಾ ಇಲಖೆ ಮೂಲಕ ವಿತರಣೆಯಾಗಿರುವ ಕಾರ್ಡ್ಗಳಿಂದ ಪತ್ರಕರ್ತರಿಗೆ ಯಾವುದೇ ಪ್ರಯೋಜನ ದೊರೆಯುತ್ತಿಲ್ಲ. ಈ ಬಗ್ಗೆ ಇಲಾಖೆಗೆ ಸಾಕಷ್ಟು ಬಾರಿ ಗಮನಕ್ಕೆ ತರಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.
ಅನಾರೋಗ್ಯಕ್ಕೆ ಒಳಗಾಗುವ ಪತ್ರಕರ್ತರು ಪ್ರತಿ ಬಾರಿಯೂ ಚಿಕಿತ್ಸೆಗಾಗಿ ನೆರವು ಕೋರಲು ತಮ್ಮ ಜನಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿಗಳ ಕಛೇರಿಗೆ ಅರ್ಜಿ ಹಿಡಿದು ಅಲೆಯಬೇಕು. ಪ್ರತಿ ವರ್ಷ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋರಿ ನೂರಾರು ಪತ್ರಕರ್ತರು ಅರ್ಜಿ ಸಲ್ಲಿಸುತ್ತಿದ್ದಾರೆ. ಇವರ ಪೈಕಿ ಕೆಲವರಿಗೆ ಮಾತ್ರ ನೆರವು ಸಿಗುತ್ತಿದ್ದು, ಉಳಿದವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಉಲ್ಲೇಖಿಸಿದೆ.
ಈ ವೇಳೆ ಯೂನಿಯನ್ ಅಧ್ಯಕ್ಷ ಜಿ.ಚಂದ್ರಶೇಖರ್, ಗೌರವಾಧ್ಯಕ್ಷ ಶಿವಕುಮಾರ್ ಬೆಳ್ಳಿತಟ್ಟೆ, ಪ್ರಧಾನ ಕಾರ್ಯದರ್ಶಿ ನಕಿರೆಕಂಟಿ ಸ್ವಾಮಿ, ಉಪಾಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಶಶಿಕುಮಾರ್, ಸುರೇಶ್, ಲಿಂಗರಾಜು, ನರಸಿಂಹ ಉಪಸ್ಥಿತರಿದ್ದರು.







