"ರಾಜ್ಯದಲ್ಲಿ ಕೃಷಿ ಕ್ಷೇತ್ರದ ಬಲವರ್ಧನೆಗೆ ನೆರವು" : ಸಚಿವ ಚಲುವರಾಯಸ್ವಾಮಿ ಮನವಿಗೆ ಕೇಂದ್ರ ಸರಕಾರದ ಸಮ್ಮತಿ

ಬೆಂಗಳೂರು: ರಾಜ್ಯದ ಕೃಷಿ ಕ್ಷೇತ್ರದ ಬಲವರ್ಧನೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪೂರಕವಾಗಿ ಬೇಕಾಗಿರುವ ವಿವಿಧ ಸಹಾಯ ಮತ್ತು ಆರ್ಥಿಕ ಸಹಕಾರವನ್ನು ಶೀಘ್ರ ಒದಗಿಸುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ನೆರವಿನ ಭರವಸೆಯನ್ನೂ ಪಡೆದಿದ್ದಾರೆ.
ಶನಿವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ರನ್ನು ಭೇಟಿ ಮಾಡಿ, ರಾಜ್ಯದ ಬೇಡಿಕೆಗಳನ್ನು ಮಂಡಿಸಿದರು.
ರಾಜ್ಯದಲ್ಲಿ ಕೃಷಿ ಇಲಾಖೆ ಶೇ.99ರಷ್ಟು ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆ ಮಾಡಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳಲ್ಲೂ ಶೇ.124ರಷ್ಟು ಅನುದಾನ ಬಳಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಇದೆ ರೀತಿ ಹಣಕಾಸಿನ ನೆರವು ಒದಗಿಸಬೇಕೆಂದು ಚಲುವರಾಯಸ್ವಾಮಿ ಕೋರಿದರು. ಕೇಂದ್ರ ಕೃಷಿ ಸಚಿವರು ಇದಕ್ಕೆ ಮುಕ್ತ ಮನಸ್ಸಿನ ಸಮ್ಮತಿ ಸೂಚಿಸಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಿಂದ ರೈತರಿಗೆ ಕೃಷಿ ಯಾಂತ್ರಿಕರಣಕ್ಕೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಈ ಬಾರಿ ಇನ್ನಷ್ಟು ಅಧಿಕ ಆರ್ಥಿಕ ನೆರವು ಒದಗಿಸುವಂತೆ ಮನವಿ ಮಾಡಿದ ಅವರು, ಆನೇಕಲ್ ತಾಲೂಕಿನ ಕಾಚನಾಯಕನಹಳ್ಳಿ ಗ್ರಾಮದಲ್ಲಿ ಗುರುತಿಸಲಾಗಿರುವ 20 ಎಕರೆ ಪ್ರದೇಶದಲ್ಲಿ ಪೆಸ್ಟಿಸೈಡ್ಸ್ ಫಾರ್ಮುಲೇಷನ್ ಟೆಕ್ನಾಲಜಿ ಸಂಸ್ಥೆ ಪ್ರಾರಂಭಕ್ಕೆ ಅನುಮೋದನೆ ಒದಗಿಸುವಂತೆ ಕೋರಿದರು.
ಸಾವಯವ, ಸಿರಿಧಾನ್ಯ ಉತ್ಪಾದನೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಮತ್ತು ಮಾರಾಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ಇದನ್ನು ಇನ್ನಷ್ಟು ಉತ್ತಮಪಡಿಸಲು ಕೇಂದ್ರ ಸರಕಾರದ ನೆರವು ಮತ್ತು ಪ್ರೋತ್ಸಾಹದ ಅಗತ್ಯವಿದೆ ಎಂದು ತಿಳಿಸಿದ ಚಲುವರಾಯಸ್ವಾಮಿ, ಜ.23 ರಿಂದ ಜ.25 ರವರೆಗೆ ನಗರದ ಅರಮನೆ ಮೈದಾನದಲ್ಲಿ ಅಂತರ್ ರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸುವಂತೆ ಶಿವರಾಜ್ ಸಿಂಗ್ ಚೌಹಾಣ್ರನ್ನು ಆಹ್ವಾನಿಸಿದರು.
ಹಿಂಗಾರು ಜೋಳಕ್ಕೆ ನೀಡಲಾಗುತ್ತಿರುವ ಬೆಂಬಲ ಬೆಲೆ ಸೌಲಭ್ಯವನ್ನು ಮುಂಗಾರಿನಿಂದಲೇ ಅನುಷ್ಠಾನಗೊಳಿಸಲು ನಿರ್ದೇಶನ ನೀಡಬೇಕು. ರಾಗಿ, ಜೋಳಗಳಂತೆ ಇತರೆ ಸಿರಿಧಾನ್ಯಗಳನ್ನು (ತೃಣ ಧಾನ್ಯಗಳು) ಕನಿಷ್ಠ ಬೆಂಬಲ ಬೆಲೆ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂದು ಚಲುವರಾಯಸ್ವಾಮಿ, ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದರು.
ಈ ಹಿಂದೆ ಜಾರಿಗೆ ಬಂದ ಆತ್ಮ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಗೊಳ್ಳುತ್ತಿದೆ. ಆದರೆ, ರಾಜ್ಯದಲ್ಲಿ ನಂತರ ಹೆಚ್ಚುವರಿಯಾಗಿ 59 ತಾಲೂಕುಗಳು ರಚನೆಯಾಗಿರುವುದರಿಂದ ಹೊಸದಾಗಿ 177 ಸಹಾಯಕ ತಾಂತ್ರಿಕ ನಿರ್ವಾಹಕರು ಅಗತ್ಯವಿದ್ದು ಅದಕ್ಕೆ ಮಂಜೂರಾತಿಯೊಂದಿಗೆ ಅನುದಾನ ಒದಗಿಸುವಂತೆ ಚಲುವರಾಯಸ್ವಾಮಿ ಕೋರಿದರು.
ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವುದು, ಬೀಜ ಕಾಯ್ದೆಯಡಿ ದಂಡ ಮತ್ತು ಪರವಾನಿಗೆ ಶುಲ್ಕ ಹೆಚ್ಚಳ ಕುರಿತು ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಪಿ.ಎಂ.ಕೆ.ಎಸ್.ವೈ–ಪಿ.ಡಿ.ಎಂ.ಸಿ ವ್ಯವಸ್ಥೆಗಳ ಸುಧಾರಣೆಗಳ ಬಗ್ಗೆ ಚಲುವರಾಯಸ್ವಾಮಿ, ಕೇಂದ್ರ ಸಚಿವರ ಗಮನ ಸೆಳೆದರು.
ಅಲ್ಲದೇ ಜಲಾನಯನ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈಗಾಗಲೇ ವಿಶ್ವಬ್ಯಾಂಕ್ ನೆರವಿನೊಂದಿಗೆ 567.98 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಿದೆ. ರಾಜ್ಯದಲ್ಲಿ ಇನ್ನೂ 59.69 ಲಕ್ಷ ಹೆಕ್ಟೇರ್ ಪ್ರದೇಶವನ್ನು ಜಲಾನಯನ ಅಭಿವೃದ್ಧಿ ಯೋಜನೆಯ ವ್ಯಾಪ್ತಿಗೆ ಸೇರಿಸಬೇಕಾಗಿದ್ದು, ಹೊಸದಾಗಿ 92 ಯೋಜನೆಗಳ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ಮತ್ತು ಅನುದಾನ ಒದಗಿಸುವಂತೆ ಅವರು ಮನವಿ ಮಾಡಿದರು.
ಕರ್ನಾಟಕದ ಕೃಷಿ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರ ಅಭಿಪ್ರಾಯ, ಮನವಿಗಳನ್ನು ಸ್ವೀಕರಿಸಿ ಚರ್ಚೆ ನಡೆಸಿದ ನಂತರ ಮಾತನಾಡಿದ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದ ಅಭಿವೃಧ್ಧಿಯ ದೃಷ್ಟಿಯಿಂದ ಒಟ್ಟಾಗಿ ಕಾರ್ಯನಿರ್ವಹಿಸೋಣ, ರಾಜ್ಯಕ್ಕೆ ಬೇಕಾದ ಎಲ್ಲ ರೀತಿಯ ನೆರವನ್ನು ಒದಗಿಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ತಿಳಿಸಿದರು.







