ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಎಫ್ಐಆರ್ ಹಿಂಪಡೆಯಬೇಕು : ಬಿ.ಕೆ.ಹರಿಪ್ರಸಾದ್ ಆಗ್ರಹ

ಬೆಂಗಳೂರು : ಕೇಂದ್ರ ಸಚಿವ ಧರ್ಮೇಂದ್ರ ರಾಜೀನಾಮೆ ಕೊಟ್ಟಿದ್ದರೂ ‘ಪ್ರಧಾನ’ ಇನ್ನು ರಾಜೀನಾಮೆ ನೀಡಿಲ್ಲ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಹೊಣೆಹೊತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ಇವರ ದಾಳಿಗೆ ಒಬ್ಬ ಮಗು ಕಣ್ಣು ಕಳೆದುಕೊಂಡಿದ್ದಾನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಇಂದಿರಾ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ 22 ವಿದ್ಯಾಥಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಎಫ್ಐಆರ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ದಿಲ್ಲಿ ಪೊಲೀಸರಿಗೆ ಎನ್ಎಸ್ಎ ಕಾಯ್ದೆಯಡಿ ಯಾರನ್ನು ಬೇಕಾದರೂ ಬಂಧಿಸಬಹುದು ಎಂದು ನೀಡಿರುವ ಹೆಚ್ಚುವರಿ ಅಧಿಕಾರವನ್ನು ಹಿಂಪಡೆಯಬೇಕು. ಪ್ರತಿಭಟನೆ ಎಂಬುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ಈಗ ಆಗಿರುವ ಅನಾಹುತಗಳಿಗೆ ಪ್ರಧಾನ್ ರಾಜೀನಾಮೆ ಒಂದೇ ಪರಿಹಾರವಲ್ಲ, ರಾಹುಲ್ ಗಾಂಧಿ ಅವರು, ವಿದ್ಯಾರ್ಥಿ ಸಂಘ ಸಂಸ್ಥೆಗಳು ಇಟ್ಟಿರುವ ಎಲ್ಲ ಬೇಡಿಕೆಗಳು ಈಡೇರಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿ ನಾಯಕ ಎಂದು ಹೇಳಿಕೊಂಡವರಿಗೆ ವಿದ್ಯಾರ್ಥಿಗಳ ಕಷ್ಟ ಅರ್ಥವಾಗದೇ ಇರುವುದು ಹಾಸ್ಯಾಸ್ಪದ. ಈವರೆಗೂ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಇದರ ವಿರುದ್ಧ ದೇಶದ ಪ್ರಜ್ಞಾವಂತ ನಾಗರಿಕರು ಹೋರಾಟ ಮಾಡಿದರು. ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಹೆಣ್ಣು ಮಕ್ಕಳ ಬಟ್ಟೆ ಹರಿದಿದ್ದರು. ಇದರಿಂದ ಜನರ ಆಕ್ರೋಶ ಮುಗಿಲು ಮುಟ್ಟಿತ್ತು. ಇದೆಲ್ಲದರ ಪರಿಣಾಮ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಶಿಕ್ಷಣ ಇಲಾಖೆ ಈ ಹಿಂದೆ ಯಾರ ಕಾಲದಲ್ಲೂ ಭ್ರಷ್ಟಾಚಾರಕ್ಕೆ ಸಿಲುಕಿರಲಿಲ್ಲ. ಬಿಜೆಪಿಯ ಅವಿದ್ಯಾವಂತೆ ಸ್ಮೃತಿ ಇರಾನಿ ಶಿಕ್ಷಣ ಸಚಿವೆಯಾಗಿದ್ದಾಗಲೂ ಭ್ರಷ್ಟಾಚಾರದ ಲೇಪ ಅವರಿಗೆ ಬಂದಿರಲಿಲ್ಲ. ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವರಾದ ಬಳಿಕ ಭ್ರಷ್ಟಾಚಾರದ ಲೇಪ ಅಂಟಿಕೊಂಡಿತು. ದೇಶದ ಎಲ್ಲ ವಿವಿಗಳಲ್ಲಿ ನಾಗ್ಪುರ ವಿವಿ ಪ್ರಾಧ್ಯಾಪಕರು, ವಾಟ್ಸಪ್ ಯೂನಿವರ್ಸಿಟಿ ಪ್ರಾಧ್ಯಾಪಕರನ್ನು ನೇಮಕ ಮಾಡಿ ಸಂಪೂರ್ಣವಾಗಿ ವಿವಿಗಳ ಸಾಮಥ್ರ್ಯ ಹಾಗೂ ಖ್ಯಾತಿ ಕುಸಿದು ಬಿದ್ದಿವೆ ಎಂದು ಅವರು ದೂರಿದರು.
ಪ್ರತಿಭಟನೆಯಲ್ಲಿ 400ಕ್ಕೂ ಹೆಚ್ಚು ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಭಾಗವಹಿಸಿದ್ದರು ಎಂಬ ಸರಕಾರದ ಸಮರ್ಥನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಸರಕಾರ ಹೇಳಿರುವ ಒಂದೇ ಒಂದು ಸತ್ಯ ಎಂದರೆ ನಾಗ್ಪುರದಿಂದ 400 ಕ್ರಿಮಿನಲ್ ಗಳು ದಿಲ್ಲಿಗೆ ಬಂದು ಪೊಲೀಸರ ವಸ್ತ್ರದಲ್ಲಿ ಈ ಆಂದೋಲನ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂಬುದು ಎಂದರು.
ಈ ರಾಜೀನಾಮೆ ಕಾಂಗ್ರೆಸ್ ಪಕ್ಷದ ಗೆಲುವೋ, ಕಾಕ್ರೋಚ್ ಪಾರ್ಟಿ ಗೆಲುವೋ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ವಿದ್ಯಾರ್ಥಿಗಳ ಹೋರಾಟದ ಗೆಲುವು. ನಾವು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹೋರಾಟ ಮಾಡಿದೆವು. ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂದ ಬಿಜೆಪಿಯವರು ನಕಲಿ ದೇಶಭಕ್ತರು. ಮಕ್ಕಳನ್ನು ದೇಶದ್ರೋಹಿ ಎನ್ನುವ ಚೇಳಾಗಳ ಹೇಳಿಕೆಗಳಿಗೆ ಮೋದಿ ಉತ್ತರ ನೀಡಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದರು.
‘ಉಮರ್ ಖಾಲಿದ್ ತಪ್ಪೇನಿದೆ?’: ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾನಿರತರು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಚಿತ್ರ ಹಿಡಿದಿದ್ದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಉಮರ್ ಖಾಲಿದ್ ತಪ್ಪೇನಿದೆ? ಆತ ಐದು ವರ್ಷಗಳಿಂದ ಜೈಲಲ್ಲಿದ್ದು, ಈವರೆಗೂ ಅವರ ವಿರುದ್ಧ ಯಾಕೆ ಎಫ್ಐಆರ್ ಆಗಿಲ್ಲ? ನಮ್ಮ ಕಾರ್ಯಕರ್ತರು ಒಂದು ಮೊಟ್ಟೆ ಹೊಡೆದಿದ್ದಕ್ಕೆ ಎಫ್ಐಆರ್ ಆಗುತ್ತದೆ. ಉಮರ್ ಖಾಲಿದ್ ವಿರುದ್ಧ ಚಾರ್ಜ್ ಶೀಟ್ ಹಾಕಿ, ನ್ಯಾಯಾಲಯ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ನಾಗ್ಪುರ ವಿವಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ಯಾವುದೇ ವಿಚಾರಣೆ ಆಗದೇ ವರ್ಷಾನುಗಟ್ಟಲೆ ಜೈಲಲ್ಲಿ ಇಟ್ಟಿದ್ದಾರಲ್ಲ ಇದು ಪಾಕಿಸ್ತಾನವೇ? ಬಿಜೆಪಿಯವರು ಪಾಕಿಸ್ತಾನವನ್ನು ನಕಲು ಮಾಡುತ್ತಿದ್ದಾರೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರೀಲ್ ಬಿಡುವುದರಲ್ಲಿ ಮೋದಿ ನಿಸ್ಸೀಮ. ಸುಳ್ಳಿನ ಸರದಾರ, ಈಗ ರೀಲಿನ ಸರದಾರ. ನಿನ್ನೆ ಮಾಡಿರುವ ರೀಲ್ ಅನ್ನು ಟೆಲಿಪ್ರಾಂಟರ್ ನೋಡಿ ಮಾಡಿರುವ ಗುಟ್ಕಾ ಮಾಸ್ಟರ್. ಅದನ್ನು ನೋಡಿ ವಿದ್ಯಾರ್ಥಿಗಳು ಕ್ಯಾಕರಿಸಿ ಉಗಿದಿದ್ದು, ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಅದನ್ನು ನೋಡಿದ ತಕ್ಷಣವೇ ಅಧಿಕಾರದಿಂದ ಕೆಳಗೆ ಇಳಿಯಬೇಕಾಗಿತ್ತು’
-ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ






