ಬೆಂಗಳೂರು | ಚಿಂದಿ ಆಯುವ ವ್ಯಕ್ತಿಗೆ ದೊರೆತ 23 ಲಕ್ಷ ರೂ. ಮೌಲ್ಯದ ಯುಎಸ್ ಡಾಲರ್: ಮುಂದೇನಾಯ್ತು?

ಬೆಂಗಳೂರು, ನ.9: ನಗರದಲ್ಲಿ ಚಿಂದಿ ಆಯುವ ವ್ಯಕ್ತಿಗೆ ಸುಮಾರು 23 ಲಕ್ಷ ರೂ. ಮೌಲ್ಯದ ಯುಎಸ್ ಡಾಲರ್ ಹಣ ದೊರೆತ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನ.1ರಂದು ನಾಗವಾರ ರೈಲು ನಿಲ್ದಾಣದ ಬಳಿ ಸೇಲ್ಮನ್ ಎಸ್.ಕೆ.(39) ಎಂಬುವರು ಚಿಂದಿ ಆಯುತ್ತಿದ್ದಾಗ ಯುಎಸ್ ಡಾಲರ್ ಹಣವಿದ್ದ ಪ್ಲಾಸ್ಟಿಕ್ ಬ್ಯಾಗ್ ದೊರೆತಿದ್ದು ಬ್ಯಾಗ್ನ ಸತ್ಯಾಸತ್ಯತೆ ಇನ್ನೂ ಪತ್ತೆಯಾಗಿಲ್ಲ, ಜೊತೆಗೆ ಬ್ಯಾಗ್ನಲ್ಲಿ ವಿಶ್ವಸಂಸ್ಥೆಯ ಮುದ್ರೆ ಹೊಂದಿರುವ ಪತ್ರವೂ ಇದೆ.
ಪಶ್ಚಿಮ ಬಂಗಾಳದ ನಾಡಿಯಾ ಮೂಲದ ಸೇಲ್ಮನ್ ಎಸ್.ಕೆ. ನಗರದಲ್ಲಿ ಚಿಂದಿ ಆಯುತ್ತಿದ್ದು, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಅವರು ಜೀವನ ಸಾಗಿಸುತ್ತಿದ್ದು. ನ.1ರಂದು ನಾಗವಾರ ರೈಲು ನಿಲ್ದಾಣದ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಹುಡುಕುತ್ತಿದ್ದಾಗ ರೈಲ್ವೆ ಹಳಿ ಮೇಲೆ ಕಪ್ಪು ಚೀಲ ಪತ್ತೆಯಾಗಿದ್ದು, ಅದನ್ನು ಅವರು ಅಮೃತಹಳ್ಳಿಯ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸೇಲ್ಮನ್ ಪ್ಲಾಸ್ಟಿಕ್ ಚೀಲವನ್ನು ತೆರೆದಾಗ ಅದರಲ್ಲಿ ಡಾಲರ್ ಕಂಡುಬಂದವು.
ಈ ಡಾಲರ್ ಗಳನ್ನು ಏನು ಮಾಡಬೇಕೆಂದು ತಿಳಿಯದೆ, ಸೇಲ್ಮನ್ ಗುಜರಿ ವ್ಯಾಪಾರಿ ಬಪ್ಪ ಎಂಬಾತನಿಗೆ ಸಿಕ್ಕ ಹಣದ ಬಗ್ಗೆ ಹೇಳಿದ್ದು, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಬಪ್ಪ ಅವರು ಬೆಂಗಳೂರಿಗೆ ಹಿಂದಿರುಗುವವರೆಗೆ ಹಣವನ್ನು ತನ್ನ ಬಳಿ ಇಟ್ಟುಕೊಳ್ಳುವಂತೆ ಸೇಲ್ಮನ್ಗೆ ತಿಳಿಸಿದ್ದಾರೆ.
ಬಳಿಕ ತನ್ನ ಮನೆಯಲ್ಲಿ ಹಣವನ್ನು ಇಡಲು ಕಷ್ಟವಾದ ಸೇಲ್ಮಾನ್ ಎರಡು ದಿನಗಳ ಬಳಿ ಸ್ವರಾಜ್ ಇಂಡಿಯಾದ ಸಾಮಾಜಿಕ ಕಾರ್ಯಕರ್ತ ಆರ್.ಕಲೀಂ ಉಲ್ಲಾ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದು, ಕಲೀಂ ಉಲ್ಲಾ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ.
ಹಣದ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದಾಗ ಹಣದ ಜತೆಗೆ ಸೇಲ್ಮನ್ನನ್ನು ಕಚೇರಿಗೆ ಕರೆತರುವಂತೆ ಬಿ.ದಯಾನಂದ ಅವರು ಹೇಳಿದ್ದು, ಅಧಿಕಾರಿಗಳ ಬಳಿ ಸೇಲ್ಮನ್ ರೈಲ್ವೆ ಹಳಿ ಮೇಲೆ ಹಣ ಸಿಕ್ಕಿರುವುದನ್ನು ಬಹಿರಂಗಪಡಿಸಿದ್ದಾರೆ. ಆಯುಕ್ತರು ಕೂಡಲೇ ಹೆಬ್ಬಾಳ ಪೆÇಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಘಟನಾ ಸ್ಥಳವನ್ನು ಪೆÇಲೀಸರು ಪರಿಶೀಲಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಆರ್.ಕಲೀಂ ಉಲ್ಲಾ ಹೇಳಿದರು.
ಇನ್ನು ಈ ಡಾಲರ್ಗಳು ನಕಲಿ ಎಂದು ತೋರುತ್ತಿದ್ದು, ಅವುಗಳನ್ನು ಸಂಪೂರ್ಣ ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ಗೆ ಕಳುಹಿಸಲಾಗಿದೆ ಎಂದು ಹೆಬ್ಬಾಳ ಪೊಲೀಸರು ಮಾಹಿತಿ ನೀಡಿದ್ದಾರೆ.







