ಬೆಂಗಳೂರು | ಪೊಲೀಸ್ ಶಸ್ತ್ರಾಗಾರಕ್ಕೆ ಅತಿಕ್ರಮವಾಗಿ ಪ್ರವೇಶ ಆರೋಪ: ಪ್ರಕರಣ ದಾಖಲು
![ಬೆಂಗಳೂರು | ಪೊಲೀಸ್ ಶಸ್ತ್ರಾಗಾರಕ್ಕೆ ಅತಿಕ್ರಮವಾಗಿ ಪ್ರವೇಶ ಆರೋಪ: ಪ್ರಕರಣ ದಾಖಲು ಬೆಂಗಳೂರು | ಪೊಲೀಸ್ ಶಸ್ತ್ರಾಗಾರಕ್ಕೆ ಅತಿಕ್ರಮವಾಗಿ ಪ್ರವೇಶ ಆರೋಪ: ಪ್ರಕರಣ ದಾಖಲು](https://www.varthabharati.in/h-upload/2024/02/12/1243124-.webp)
ಬೆಂಗಳೂರು: ಸರಕಾರಿ ಜಾಗದಲ್ಲಿರುವ ಪೊಲೀಸ್ ಶಸ್ತ್ರಾಗಾರಕ್ಕೆ ನುಗ್ಗಿ ದಾಂಧಲೆ ಸೃಷ್ಠಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಅಪರಿಚಿತರ ವಿರುದ್ಧ ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಉಳ್ಳಾಲ ಉಪನಗರದಲ್ಲಿರುವ ಸಿಎಆರ್ ಪಶ್ಚಿಮ ವಿಭಾಗದ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಆರೋಪಿಗಳು ದಾಂಧಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಫೆ.8ರಂದು ಸಿಎಆರ್ ಪಶ್ಚಿಮ ವಿಭಾಗದ ಶಸ್ತ್ರಾಗಾರದ ಬಳಿ ಬಂದಿದ್ದ 15ರಿಂದ 20 ಜನ ಆರೋಪಿಗಳು ‘ಇದು ನಮಗೆ ಸೇರಿದ ಜಾಗ, ನೀವು ಜಾಗ ಖಾಲಿ ಮಾಡಬೇಕು' ಎಂದಿದ್ದರು.
ಈ ವೇಳೆ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ರುದ್ರೇಶ್ ನಾಯ್ಕ್, ‘ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ನನ್ನೊಂದಿಗೆ ಯಾಕೆ ದರ್ಪದಿಂದ ಮಾತನಾಡುತ್ತಿದ್ದೀರಿ' ಎಂದು ಪ್ರಶ್ನಿಸಿದಾಗ ಸಮವಸ್ತ್ರದಲ್ಲಿದ್ದ ಅವರ ಬಟ್ಟೆಯನ್ನು ಎಳೆದಾಡಿದ್ದರು. ಹೊರಗಡೆ ಬಂದಾಗ 60-70 ಜನ ಜೆಸಿಬಿ, ಕ್ಯಾಂಟರ್, ಲಾರಿ, ಟ್ಯಾಂಕರ್ ಗಳೊಂದಿಗೆ ಸಿದ್ದವಾಗಿ ಬಂದಿದ್ದು, ತಮಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆ ಕುರಿತು ಸಿಎಆರ್ ಕಾನ್ಸ್ಟೇಬಲ್ ನೀಡಿದ ದೂರಿನನ್ವಯ ಅಪರಿಚಿತರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.