ಬೆಂಗಳೂರು | ಕ್ಷುಲ್ಲಕ ಕಾರಣಕ್ಕೆ ಹತ್ಯೆ: ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ವಾಹನದ ವಿಚಾರವಾಗಿ ಚಾಲಕನ ಮೇಲೆ ಹಲ್ಲೆ ಮಾಡಿ ಆತನ ಸಾವಿಗೆ ಕಾರಣರಾದ ನಾಲ್ವರನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕ ಸಲ್ಮಾನ್ (28) ಎಂಬಾತನ ಸಾವಿಗೆ ಕಾರಣರಾದ ಆರೋಪದಡಿ ತಬ್ರೇಝ್, ಫರ್ವೇಝ್, ಸಾದಿಕ್ ಹಾಗೂ ತೌಸೀಫ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಸಲ್ಮಾನ್ ಎಂದಿನಂತೆ ಕೆಲಸಕ್ಕೆ ತೆರಳಿದ್ದಾಗ ಆರೋಪಿ ಫರ್ವೇಝ್ ತಂದೆಯ ವಾಹನಕ್ಕೆ ಆಟೊ ತಾಕಿದೆ. ಆ ಸಂದರ್ಭದಲ್ಲಿ ಫರ್ವೇಝ್ ತಂದೆ ಹಾಗೂ ಸಲ್ಮಾನ್ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಆಗ ಫರ್ವೇಝ್ ತಂದೆ, ಮಗನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದರು. ಸ್ಥಳಕ್ಕೆ ಬಂದಿದ್ದ ಫರ್ವೇಝ್ ಸೇರಿದಂತೆ ಆರೋಪಿಗಳು ಸಲ್ಮಾನ್ ಮೇಲೆ ಹಲ್ಲೆ ಮಾಡಿದ್ದರು.
ಹಲ್ಲೆಗೊಳಗಾಗಿದ್ದ ಸಲ್ಮಾನ್ ಈ ಬಗ್ಗೆ ಆರ್.ಟಿ.ನಗರ ಠಾಣೆಗೆ ತೆರಳಿ ದೂರು ನೀಡಿದ್ದ. ಸಲ್ಮಾನ್ ದೂರು ನೀಡಿರುವುದು ತಿಳಿಯುತ್ತಿದ್ದಂತೆ ಪುನಃ ಸಲ್ಮಾನ್ನನ್ನು ಹುಡುಕಿಕೊಂಡು ಬಂದಿದ್ದ ಆರೋಪಿಗಳು, ಗಲಾಟೆ ಮಾಡಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಕುಸಿದು ಬಿದ್ದ ಸಲ್ಮಾನ್ ಅಸ್ವಸ್ಥನಾಗಿದ್ದ. ವಿಷಯ ತಿಳಿದ ಕುಟುಂಬದವರು ಸಲ್ಮಾನ್ನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದರಾದರೂ, ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡ ಆರ್.ಟಿ.ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.







