ಮುಸ್ಲಿಮ್ ಮಹಿಳೆಯರ ಬಗ್ಗೆ ಪೂರ್ವಾಗ್ರಹ ತೊಲಗಲಿ : ಬಾನು ಮುಷ್ತಾಕ್

ಬೆಂಗಳೂರು : ‘ಭಾರತೀಯತೆ ಯಾರ ಅಪ್ಪನ ಮನೆಯ ಆಸ್ತಿಯೂ ಅಲ್ಲ. ಅದು ನಮ್ಮ ಹಕ್ಕು, ಜೀವ, ನಮ್ಮ ಉಸಿರು. ನಾವು ಈ ದೇಶದಲ್ಲಿ ಭಾರತೀಯರು ಎಂಬ ಅಸ್ಮಿತೆಯ ಅಡಿಯಲ್ಲಿ ಬದುಕುವುದಕ್ಕೆ ಸಾಧ್ಯವಿದೆ’ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ತಿಳಿಸಿದ್ದಾರೆ.
ರವಿವಾರ ಸಹಕಾರ ನಗರದಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಅಹಮದಿಯಾ ಮುಸ್ಲಿಮ್ ಕಮ್ಯೂನಿಟಿ ಜಕ್ಕೂರು ಘಟಕ ವತಿಯಿಂದ ನಡೆದ ‘ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಸ್ಲಿಮ್ ಮಹಿಳೆಯರ ಬಗ್ಗೆ ಅನೇಕ ಪೂರ್ವಗ್ರಹಗಳಿದ್ದು, ಅವರನ್ನು ಕೇವಲ ಉಡುಪುಗಳಿಂದ ಗುರುತಿಸಲಾಗುತ್ತಿದೆ. ಅವರ ಧ್ವನಿಯನ್ನು ಕೇಳದೆ ತೀರ್ಪುಗಳನ್ನು ನೀಡಲಾಗುತ್ತಿದೆ. ಇಲ್ಲಿ ಮಾಧ್ಯಮ ಹಾಗೂ ಸಮಾಜದ ಪೂರ್ವಗ್ರಹಗಳಿಗೆ ಮುಸ್ಲಿಮ್ ಮಹಿಳೆಯರು ಎಷ್ಟು ಹೊಣೆಗಾರರಾಗಿದ್ದಾರೋ, ನಾವು ಅಷ್ಟೇ ಕಾರಣ ಆಗಿದ್ದೇವೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಬಾನು ಮುಷ್ತಾಕ್ ಹೇಳಿದರು.
ಮುಸ್ಲಿಮ್ ಮಹಿಳೆಯರು ಬಹಳ ಕೊಳಕು, ಅನೇಕ ಮಕ್ಕಳನ್ನು ಹೆರುತ್ತಾರೆ, ಅವಿದ್ಯಾವಂತರಾಗಿದ್ದಾರೆ, ಅವರು ಸರಿಯಲ್ಲ. ಬುರ್ಖಾ ಧರಿಸಿ ನಮ್ಮ ಪಕ್ಕ ಕುಳಿತುಕೊಂಡರೆ ನಮಗೆ ಹೆದರಿಕೆ ಆಗುತ್ತದೆ ಎಂಬ ಅನೇಕ ಪೂರ್ವಗ್ರಹಗಳಿವೆ. ಇದನ್ನು ಸಮಾಜ ಸೇರಿ ಮಾಧ್ಯಮಗಳಲ್ಲಿ ನಿರಂತರವಾಗಿ ಬಿತ್ತಲಾಗುತ್ತಿದೆ. ಇದು ಸಂಪೂರ್ಣವಾಗಿ ಅವರದೇ ತಪ್ಪಾ? ಇದರಲ್ಲಿ ನಮ್ಮ ತಪ್ಪು ಇಲ್ಲವೇ? ಎಂದು ಬಾನು ಮುಷ್ತಾಕ್ ಪ್ರಶ್ನಿಸಿದರು.
ಧರ್ಮ ಎಂಬುದು ನನಗೆ ವೈಯಕ್ತಿಕ. ಆದುದರಿಂದ ನಾನು ಮನೆಯ ಹೊಸ್ತಿಲ ಒಳಗೆ ನನ್ನ ಧರ್ಮವನ್ನು ಆಚರಿಸುತ್ತೇನೆ. ಹೊರಗಡೆ ನಾನು ಸೆಕ್ಯುಲರ್(ಜಾತ್ಯತೀತ) ಮುಸ್ಲಿಮ್ ಆಗಿದ್ದೇನೆ. ಆದರೆ, ಈಗ ಸೆಕ್ಯುಲರ್ ಮುಸ್ಲಿಮರಿಗೂ ರಕ್ಷಣೆ ಇಲ್ಲದಂತಾಗಿದೆ. ನಮ್ಮ ಗುರುತು ಅಥವಾ ಅಸ್ಮಿತೆ ಎಂದರೇ ಬರಿ ಬಟ್ಟೆನಾ? ಚಿಂತನೆ ಏನಾದರೂ ಇದೆಯೇ? ಕುರ್ಆನ್ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಗೌರವ ಹಾಗೂ ಅವಕಾಶಗಳನ್ನು ನೀಡಲಾಗಿದೆ. ಆದರೆ, ಈಗ ನಮ್ಮನ್ನು ಬರೀ ಬಟ್ಟೆಯ ಮೂಲಕ ಗುರುತಿಸುತ್ತಿರುವುದು ಎಷ್ಟು ಸರಿ? ಗುರುತು ನಮಗೆ ಮುಖ್ಯವಾಗುವುದಾದರೆ ಸೆಕ್ಯುಲರ್ ಗುರುತು ಮುಖ್ಯವೊ ಅಥವಾ ಧಾರ್ಮಿಕ ಗುರುತು ಮುಖ್ಯವೊ ಎಂದು ಬಾನು ಮುಷ್ತಾಕ್ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಅಹಮದಿಯಾ ಮುಸ್ಲಿಮ್ ಕಮ್ಯೂನಿಟಿ ಜಕ್ಕೂರು ಘಟಕದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.






