ಬೆಂಗಳೂರು | ಪಾರ್ಕಿಂಗ್ ವಿಚಾರವಾಗಿ ಗಲಾಟೆ: ಭದ್ರತಾ ಸಿಬ್ಬಂದಿ ಹತ್ಯೆ

ಬೆಂಗಳೂರು : ಪಾರ್ಕಿಂಗ್ ವಿಚಾರವಾಗಿ ಗಲಾಟೆ ನಡೆದಿದ್ದು, ಈ ವೇಳೆ ಭದ್ರತಾ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಫೆ.28ರ ಸಂಜೆ ಇಲ್ಲಿನ ಟಿಂಬರ್ ಯಾರ್ಡ್ ಬಳಿ ಘಟನೆ ನಡೆದಿದ್ದು, ಭದ್ರತಾ ಸಿಬ್ಬಂದಿ ಗಣೇಶ್ ಬಹುದ್ದೂರ್ ರಾವಲ್ (30) ಮೃತಪಟ್ಟಿರುವುದಾಗಿ ಪೊಲೀಸರು ಗುರುತಿಸಿದ್ದಾರೆ.
ಹತ್ಯೆಯಾಗಿರುವ ಗಣೇಶ್ ಬಹುದ್ದೂರ್ ರಾವಲ್ ಗಾರ್ಮೆಂಟ್ಸ್ ವೊಂದರಲ್ಲಿ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡಿಕೊಂಡಿದ್ದ. ಅದೇ ಗಾರ್ಮೆಂಟ್ಸ್ ಗೆ ಡೆಲಿವರಿ ಬಾಯ್ ಬಂದಿದ್ದ. ಈ ವೇಳೆ, ದ್ವಿಚಕ್ರ ವಾಹನ ಪಾರ್ಕಿಂಗ್ ವಿಚಾರದಲ್ಲಿ ಡೆಲಿವರಿ ಬಾಯ್ ಹಾಗೂ ಭದ್ರತಾ ಸಿಬ್ಬಂದಿ ನಡುವೆ ವಾಗ್ವಾದವಾಗಿತ್ತು.
ಬಳಿಕ ಡೆಲಿವರಿ ಬಾಯ್ ಸ್ಥಳದಿಂದ ತೆರಳಿದ್ದ. ಶುಕ್ರವಾರ ಸಂಜೆ ನೌಕರರು ಗಾರ್ಮೆಂಟ್ಸ್ ನಿಂದ ಹೋದ ಬಳಿಕ ಸ್ಥಳಕ್ಕೆ ಬಂದಿದ್ದ ಆರೋಪಿ ಡೆಲಿವರಿ ಬಾಯ್, ಗಣೇಶ್ ಬಹದ್ದೂರ್ ನ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ ಎಂದು ಹೇಳಲಾಗುತ್ತಿದೆ.
ತೀವ್ರವಾಗಿ ರಕ್ತಸ್ರಾವದಿಂದ ಬಳಲುತ್ತಿದ್ದ ಗಣೇಶ್ ಬಹದ್ದೂರ್ ನನ್ನು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಸದ್ಯ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಾಗಿ ಪತ್ತೆ ಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







