ಬೆಂಗಳೂರು | ವ್ಯಕ್ತಿ ಮೇಲೆ ಖಾಸಗಿ ಬಸ್ ಸಿಬ್ಬಂದಿಯಿಂದ ಹಲ್ಲೆ; ಪ್ರಕರಣ ದಾಖಲು

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಹುಬ್ಬಳ್ಳಿ ಮೂಲದ ಮಾಡೆಲ್ವೊಬ್ಬರ ಮೇಲೆ ಖಾಸಗಿ ಬಸ್ ಸಿಬ್ಬಂದಿ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿರುವ ಘಟನೆ ಇಲ್ಲಿನ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಧೃವನಾಯ್ಕ್ ಎಂಬುವರು ಹಲ್ಲೆಗೊಳಗಾದ ಮಾಡೆಲ್ ಎಂದು ಗುರುತಿಸಲಾಗಿದೆ. ಜು.1ರಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಲು ಧೃವನಾಯ್ಕ್ ಅವರು ಬಸ್ ಬುಕ್ ಮಾಡಿದ್ದು, ಸ್ನೇಹಿತನ ಜೊತೆ ರಾತ್ರಿ 11.30ರ ಸುಮಾರಿಗೆ ಆನಂದ್ರಾವ್ ಸರ್ಕಲ್ ಬಳಿ ಬಂದಿದ್ದಾರೆ. ಆ ವೇಳೆ ಸಿಗರೇಟ್ ಸೇದುತ್ತಾ ಸ್ನೇಹಿತನ ಜೊತೆ ಮಾತನಾಡುತ್ತಾ ತಾನು ಹೊರಡಬೇಕಿದ್ದ ಬಸ್ ಬಳಿ ಧೃವನಾಯ್ಕ್ ನಿಂತಿದ್ದಾಗ ಏಕಾಏಕಿ ಚಾಲಕ ಬಸ್ ಬಾಗಿಲು ಹಾಕಿಕೊಂಡು ನಿಧಾನವಾಗಿ ಬಸ್ ಚಾಲನೆ ಮಾಡಿಕೊಂಡು ಮುಂದೆ ಹೋಗಿದ್ದಾನೆ.
ಇದನ್ನು ಗಮನಿಸಿದ ಧೃವನಾಯ್ಕ್ ತಕ್ಷಣ ಬಸ್ ಅಡ್ಡಗಟ್ಟಿ ನಿಲ್ಲಿಸಿ ನಾನು ಈ ಬಸ್ನಲ್ಲಿ ಬರುವುದಿದೆ ಎಂದು ಹೇಳಿದ್ದಾರೆ. ಆ ವೇಳೆ ಬಸ್ ಸಿಬ್ಬಂದಿ ಹಾಗೂ ಧೃವನಾಯ್ಕ್ ನಡುವೆ ಗಲಾಟೆಯಾಗಿದ್ದು, ಸಿಬ್ಬಂದಿ ಸೇರಿಕೊಂಡು ಧೃವನಾಯ್ಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಧೃವನಾಯ್ಕ್ ಅವರ ಮುಖ, ಕುತ್ತಿಗೆ, ಎದೆ ಸೇರಿದಂತೆ ದೇಹದ ಇನ್ನಿತರ ಭಾಗಗಳ ಮೇಲೆ ಗಂಭೀರ ಗಾಯಗಳಾಗಿವೆ. ಅಲ್ಲದೆ ಧೃವನಾಯ್ಕ್ ಬ್ಯಾಗ್ನಲ್ಲಿದ್ದ ದುಬಾರಿ ಬೆಲೆಯ ಶೂ, ಇಯರ್ ಬಡ್ರ್ಸ್, 44 ಸಾವಿರ ಬೆಲೆಯ ಸನ್ಗ್ಲಾಸ್, 1.85 ಲಕ್ಷ ರೂ. ಬೆಲೆಯ ಪ್ಲಾಟಿನಂ ಪೆಂಡೆಂಟ್ ಇರುವ ಬೆಳ್ಳಿ ಸರ, ಪಾಸ್ಪೋರ್ಟ್, 45 ಸಾವಿರ ರೂ. ಬೆಲೆ ಬಾಳುವ ವಾಚ್, 40 ಸಾವಿರ ರೂ ಮೌಲ್ಯದ ಪ್ಲಾಟಿನಂ ರಿಂಗ್ ಹಾಗೂ ಪರ್ಸ್ನಲ್ಲಿದ್ದ 10 ಸಾವಿರ ಹಣ ಕಳವು ಮಾಡಿರುವುದಾಗಿ ಧೃವನಾಯ್ಕ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.