ಬೆಂಗಳೂರು | ನಟಿಗೆ ಲೈಂಗಿಕ ಕಿರುಕುಳ ಆರೋಪ; ಸಿನೆಮಾ ನಿರ್ಮಾಪಕ ಸೆರೆ

ಅರವಿಂದ ವೆಂಕಟರೆಡ್ಡಿ(43)
ಬೆಂಗಳೂರು : ಚಲನಚಿತ್ರ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಚಿತ್ರ ನಿರ್ಮಾಪಕನನ್ನು ಇಲ್ಲಿನ ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಎವಿಆರ್ ಗ್ರೂಪ್ ಮಾಲಕನೂ ಆದ ಚಲನಚಿತ್ರ ನಿರ್ಮಾಪಕ ಅರವಿಂದ ವೆಂಕಟರೆಡ್ಡಿ(43) ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
2021ರಲ್ಲಿ ಪರಿಚಯವಾದ ನಟಿಯನ್ನು ಅರವಿಂದ ವೆಂಕಟ ರೆಡ್ಡಿ ಮದುವೆಯಾಗುವುದಾಗಿ ನಂಬಿಸಿದ್ದ. ಬಳಿಕ ಆ ನಟಿಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದಾನೆ. ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ ಲಾರ್ಸ್ ಕ್ರಿಕೆಟ್ಕಪ್ ಉದ್ಘಾಟನೆಗೆ ನಟಿಯನ್ನು ಆತ ಕರೆದೊಯ್ದಿದ್ದ. ಅಲ್ಲಿಯೂ ಸಹ ಆಕೆಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಆತನ ವರ್ತನೆಯಿಂದ ನೊಂದಿದ್ದ ನಟಿ ಆರ್ಆರ್ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರೂ ಸಹ ಆ ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಹಾಗಾಗಿ ನಟಿ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ಆಯುಕ್ತರು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಗೋವಿಂದರಾಜನಗರ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಸಿಪಿ ಚಂದನ್ ಅವರ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಚಿತ್ರನಿರ್ಮಾಪಕ ಅರವಿಂದ್ ವೆಂಕಟರೆಡ್ಡಿ ಶ್ರೀಲಂಕಾದಿಂದ ನಗರಕ್ಕೆ ಬರುತ್ತಿರುವ ಮಾಹಿತಿ ತಿಳಿದು ವಿಮಾನ ನಿಲ್ದಾಣಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.







