Bengaluru | ಕಿರುಕುಳ ಆರೋಪ: ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು : ಖಾಸಗಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ವರದಿಯಾಗಿದೆ.
ಯಶಸ್ವಿನಿ (23) ಎಂಬ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿಯ ಖಾಸಗಿ ಡೆಂಟಲ್ ಕಾಲೇಯೊಂದರ ವಿದ್ಯಾರ್ಥಿಯಾಗಿರುವ ಯಶಸ್ವಿನಿ, ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿ ವಿಭಾಗದಲ್ಲಿ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿ ಓದುತ್ತಿದ್ದಳು. ಕಣ್ಣು ನೋವಾಗಿದ್ದರಿಂದ ಯಶಸ್ವಿನಿ ಬುಧವಾರ(ಡಿ.7) ಕಾಲೇಜಿಗೆ ರಜೆ ಹಾಕಿದ್ದಳು. ಗುರುವಾರ(ಡಿ.8) ಕಾಲೇಜಿಗೆ ಹೋದಾಗ ವಿದ್ಯಾರ್ಥಿಗಳ ಮುಂದೆ ಆಕೆಗೆ ಉಪನ್ಯಾಸಕ ಅವಮಾನ ಮಾಡಿರುವುದಾಗಿ ಆರೋಪಿಸಲಾಗಿದೆ.
‘ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ, ಎಷ್ಟು ಹನಿ ಹಾಕಿಕೊಂಡೆ? ಇಡೀ ಬಾಟಲಿ ಸುರಿದುಕೊಂಡಾ?’ ಎಂದೆಲ್ಲ ವ್ಯಂಗ್ಯವಾಗಿ ಪ್ರಶ್ನಿಸಿ ಉಪನ್ಯಾಸಕ ಅವಮಾನಿಸಿದ್ದಾರೆ. ಅಲ್ಲದೇ, ಯಶಸ್ವಿನಿಗೆ ಸೆಮಿನಾರ್ಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ, ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಆರೋಪಿಸಿದ್ದಾರೆ.
ಕಿರುಕುಳ ಕೊಟ್ಟ ಉಪನ್ಯಾಸಕ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಚಂದಾಪುರ ಆಸ್ಪತ್ರೆಯ ಶವಾಗಾರದ ಮುಂದೆ ಯಶಸ್ವಿನಿ ಪೋಷಕರ ಜತೆಗೆ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ(ಡಿ.9) ಪ್ರತಿಭಟನೆ ನಡೆಸಿದ್ದಾರೆ.







