Bengaluru | ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಪತಿ ಮಾರಾಟ ಮಾಡಿದ್ದ ಶಾಲೆಯನ್ನು ಮರಳಿ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 16 ಲಕ್ಷ ರೂ. ಹಣ ಪಡೆದು, ಲೈಂಗಿಕ ಕಿರುಕುಳ ನೀಡಿ ಜಾತಿ ನಿಂದನೆ ಮಾಡಿದ ಆರೋಪದಡಿ ಎನ್ಜಿಒಯೊಂದರ ಸಿಇಒನನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿಸಿಆರ್ಇ)ದ ಪೊಲೀಸರು ಬಂಧಿಸಿದ್ದಾರೆ.
43 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರನ್ನು ಆಧರಿಸಿ ಮೊಹಮ್ಮದ್ ಹನೀಫ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಿಟಿಎಂ ಲೇಔಟ್ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆಯು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ದಂಪತಿ ಅನೋನ್ಯವಾಗಿದ್ದಾಗ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದರು. ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಪತ್ನಿಗೆ ತಿಳಿಯದೆ ಪತಿ ಶಾಲೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ.
ಈ ವಿಷಯ ತಿಳಿದು ಆತಂಕಕ್ಕೊಳಗಾಗಿದ್ದ ಮಹಿಳೆಗೆ ಪರಿಚಯಸ್ಥರ ಮೂಲಕ ಮೊಹಮ್ಮದ್ ಹನೀಫ್ ಎಂಬಾತನ ಸಂಪರ್ಕವಾಗಿತ್ತು. ತಾನು ಎನ್ಜಿಒ ಸಿಇಒ ಹಾಗೂ ಖಾಸಗಿ ಮಾಧ್ಯಮವೊಂದರ ಎಂ.ಡಿ. ಎಂದು ಆತ ಮಹಿಳೆಯನ್ನು ನಂಬಿಸಿದ್ದ. ಪೊಲೀಸ್ ಅಧಿಕಾರಿಗಳ ಮೂಲಕ ಮಾತನಾಡಿ ಶಾಲೆಯನ್ನು ಮರಳಿ ಕೊಡಿಸುವುದಾಗಿ ಭರವಸೆ ನೀಡಿದ್ದ ಹನೀಫ್, ಈ ಕೆಲಸಕ್ಕಾಗಿ ಹಂತ ಹಂತವಾಗಿ ಒಟ್ಟು 16 ಲಕ್ಷ ರೂ. ಹಣ ಪಡೆದಿದ್ದ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಶಾಲೆ ವಾಪಸ್ ಕೊಡಿಸುವ ಬಗ್ಗೆ ಪ್ರಸ್ತಾಪಿಸಿದಾಗ ಆರೋಪಿಯು ನನಗೆ ಗೊತ್ತಿರುವ ಕೇರಳ ಮೂಲದ ಜ್ಯೋತಿಷಿಯೊಬ್ಬರ ಪರಿಚಯವಿದೆ. ಅವರಿಂದ ಕೆಲ ಪೂಜೆಗಳನ್ನು ಮಾಡಿಸಿದರೆ ಒಳ್ಳೆಯದಾಗಲಿದೆ ಎಂದು ಹೇಳಿದ್ದ. ಅದರಂತೆ ನನ್ನನ್ನು ಜ್ಯೋತಿಷಿಯ ಮನೆಗೆ ಕರೆದೊಯ್ಯುತ್ತಿದ್ದ. ಪ್ರತಿ ಬಾರಿ ಅಲ್ಲಿಗೆ ಹೋದಾಗ ಟೀಯಲ್ಲಿ ಮದ್ದು ಬೆರೆಸಿ ಕೊಡುತ್ತಿದ್ದ. ನಾನು ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಲೈಂಗಿಕವಾಗಿ ಮಾತನಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಇದಾದ ಎರಡು ವರ್ಷಗಳ ಬಳಿಕ ಆರೋಪಿಯು ತನ್ನ ಕಚೇರಿಯನ್ನು ನಾಯಂಡಹಳ್ಳಿಗೆ ವರ್ಗಾಯಿಸಿದ್ದ. ಅಲ್ಲಿಗೆ ಹೋದಾಗ ಆರೋಪಿ ನನ್ನ ಇಚ್ಚೆಗೆ ವಿರುದ್ಧವಾಗಿ ಮೈ ಮುಟ್ಟಿ ಕಿರುಕುಳ ನೀಡಿದ್ದ. ಇದನ್ನ ಪ್ರಶ್ನಿಸಿದಾಗ ನನ್ನನ್ನ ಮದುವೆಯಾಗು ಎಲ್ಲವೂ ಸರಿಯಾಗಲಿದೆ ಎಂದು ಒತ್ತಾಯಿಸಿದ್ದ. ಈತನ ದೈಹಿಕ ಹಾಗೂ ಮಾನಸಿಕ ಕಿರುಕುಳ ದಿನೇ ದಿನೇ ಹೆಚ್ಚಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದು ಜಾತಿ ನಿಂದನೆ ಮಾಡಿದ್ದ ಎಂದು ಸಂತ್ರಸ್ತ ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಸಂತ್ರಸ್ತ ಮಹಿಳೆ ಮೊದಲು ಬ್ಯಾಟರಾಯಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಜಾತಿ ನಿಂದನೆಯ ಅಂಶಗಳಿದ್ದ ಕಾರಣ ತನಿಖೆಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಅಧಿಕಾರಿಗಳು ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.







