Bengaluru | ‘ಅಡುಗೆ ಅನಿಲದ ಬೆಲೆ ಏರಿಕೆ’ ಖಂಡಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆ

ಬೆಂಗಳೂರು : ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಪ್ರಧಾನಿ ಮೋದಿ ‘ಗಟಾರ್ ಗ್ಯಾಸ್’ ಹೇಳಿಕೆ ವಿರುದ್ಧ ವಿನೂತನ ಅಣಕು ಪ್ರದರ್ಶನ ನಡೆಸಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ಹೇಳಿರುವ ‘ಗಟಾರ್ ಗ್ಯಾಸ್’ ಕುರಿತ ಅವೈಜ್ಞಾನಿಕ ಹೇಳಿಕೆಗಳನ್ನು ಖಂಡಿಸಿ, ದೇಶದ ಜನತೆಗೆ ದಾರಿ ತಪ್ಪಿಸುವ ರೀತಿಯ ಹೇಳಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ದೇಶದ ಜನರಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಾಗ ಕೇಂದ್ರ ಸರಕಾರದ ಜವಾಬ್ದಾರಿ ಏನು?. ಜನರ ಕಷ್ಟಕ್ಕೆ ಪರಿಹಾರ ನೀಡುವುದು ಸರಕಾರದ ಆದ್ಯ ಕರ್ತವ್ಯ. ಆದರೆ, ಕೇಂದ್ರ ಸರಕಾರ ಪ್ರಚಾರದಲ್ಲೇ ತೊಡಗಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುವ ಪ್ರಧಾನಿಯವರು ‘ಗಟಾರ್ ಗ್ಯಾಸ್’ ಎಂಬ ಅವೈಜ್ಞಾನಿಕ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ? ಇದು ದೇಶದ ಯುವಕರಿಗೂ ಮತ್ತು ವಿಜ್ಞಾನ ಮನೋಭಾವಕ್ಕೂ ತಪ್ಪು ಸಂದೇಶ ನೀಡುವಂತಾಗಿದೆ ಎಂದು ಖಂಡಿಸಿದರು.
ಜನರು ದುಬಾರಿ ಗ್ಯಾಸ್ ದರದಿಂದ ತೀವ್ರ ಸಂಕಷ್ಟದಲ್ಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಆದ್ಯತೆ ಏನು ಎಂಬುದರ ಬಗ್ಗೆ ಮೋದಿ ಸರಕಾರ ಉತ್ತರ ನೀಡಬೇಕು. ಜನರಿಗೆ ಪರಿಹಾರ ನೀಡುವ ಬದಲು ಪ್ರಚಾರ ಮತ್ತು ರಾಜಕೀಯ ಭಾಷಣಗಳೇ ಹೆಚ್ಚಾಗಿವೆ. ಸಂಸತ್ತಿನಲ್ಲಿ ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗಳಿಗೆ ಉತ್ತರ ನೀಡದೆ ತಪ್ಪಿಸಿಕೊಳ್ಳುವುದು ಏಕೆ? ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದು ಸರಕಾರದ ಕರ್ತವ್ಯ ಎಂಬುದನ್ನು ಪ್ರಧಾನಿ ಮೋದಿ ಅವರು ಮರೆತಿದ್ದಾರೆ ಎಂದು ಎಸ್.ಮನೋಹರ್ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಜನರ ಸಮಸ್ಯೆಗಳಿಗೆ ಉತ್ತರ ನೀಡುವಲ್ಲಿ ವಿಫಲವಾಗಿರುವ ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರರಾದ ಆನಂದ್ಕುಮಾರ್ ಎಂ.ಎಸ್., ಪ್ರಕಾಶ್, ಒಬಳೇಶ್, ಚಿನ್ನಿಪ್ರಕಾಶ್, ಹೇಮರಾಜ್, ಪುಟ್ಟರಾಜು, ಸುಂಕದಕಟ್ಟೆ ನವೀನ್, ಕುಶಾಲ್ ಹರವೇಗೌಡ, ಸಾಯಿ ನವೀನ್, ಪ್ರವೀಣ್ ರಾವ್, ಬಾಲಾಜಿ ಡಿ. ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.







