Bengaluru | ಚಿನ್ನಾಭರಣ ಅಡವಿಟ್ಟ ಗ್ರಾಹಕರಿಗೆ ವಂಚನೆ: ಜ್ಯುವೆಲ್ಲರಿ ಮಳಿಗೆಯ ಮಾಲಕ ಪರಾರಿ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು, ಮೇ 9: ಚಿನ್ನಾಭರಣ ಅಡವಿಟ್ಟ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಜ್ಯುವೆಲ್ಲರಿ ಮಳಿಗೆಯ ಮಾಲಕನೊಬ್ಬ ಪರಾರಿಯಾಗಿರುವ ಘಟನೆ ಶನಿವಾರ ವರದಿಯಾಗಿದೆ.
ಬೆಂಗಳೂರಿನ ಚಿಕ್ಕಬಾಣಾವರದಲ್ಲಿರುವ ರಾಘವೇಂದ್ರ ಜ್ಯುವೆಲ್ಲರಿ ಮಳಿಗೆಯ ಮಾಲಕ ತೇಜಸ್ ಗೌಡ ಯಾನೆ ಮೂರ್ತಿ ಪರಾರಿಯಾಗಿರುವ ಆರೋಪಿ ಎಂದು ಗುರುತಿಸಲಾಗಿದೆ. ಕಡಿಮೆ ಬಡ್ಡಿಯ ಆಸೆ ತೋರಿಸಿ 50 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಿಸಿರುವ ಪೊಲೀಸರು ಆರೋಪಿಯ ಪತ್ತೆಗೆ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಈತ ಒಂದು ತಂಡವನ್ನು ರಚಿಸಿಕೊಂಡು, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಯಾರು ಚಿನ್ನ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಕಲೆಹಾಕುತ್ತಿದ್ದ. ನಂತರ ಅಂತಹ ಗ್ರಾಹಕರನ್ನು ಸಂಪರ್ಕಿಸಿ, ಕಡಿಮೆ ಬಡ್ಡಿಗೆ ಹೆಚ್ಚು ಸಾಲ ನೀಡುತ್ತೇನೆ ಎಂದು ಆಮಿಷ ಒಡ್ಡುತ್ತಿದ್ದ. ಗ್ರಾಹಕರು ನಂಬಿದ ತಕ್ಷಣ, ಅವರು ಅಡವಿಟ್ಟಿದ್ದ ಜಾಗಕ್ಕೆ ಹೋಗಿ ಹಣ ಪಾವತಿಸಿ ಚಿನ್ನ ಬಿಡಿಸುತ್ತಿದ್ದ. ಬಳಿಕ ಆ ಚಿನ್ನವನ್ನು ತನ್ನದೇ ರಾಘವೇಂದ್ರ ಜ್ಯುವೆಲ್ಲರಿ ಮಳಿಗೆಯಲ್ಲಿ ಇರಿಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.






