ಸಮುದಾಯವನ್ನು ಸಂಪೂರ್ಣವಾಗಿ ಶಿಕ್ಷಿತರನ್ನಾಗಿಸಲು ಪಣತೊಡಬೇಕು : ಸೈಯದ್ ಮುಹಮ್ಮದ್ ಬ್ಯಾರಿ

ಬೆಂಗಳೂರು : ಬ್ಯಾರಿ ಸಮುದಾಯವು ಶೈಕ್ಷಣಿಕವಾಗಿ ಮುಂದಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಇಂದಿಗೂ ಹಲವಾರು ಹಳ್ಳಿಗಳಲ್ಲಿ ಸಮಪರ್ಕ ಶಿಕ್ಷಣ ಸಿಗುತ್ತಿಲ್ಲ. ಆದುದರಿಂದ, ನಾವು ನಮ್ಮ ಸಮಾಜ ಹಾಗೂ ಸಮುದಾಯವನ್ನು ಸಂಪೂರ್ಣವಾಗಿ ಶಿಕ್ಷಿತರನ್ನಾಗಿಸಲು ಪಣತೊಡಬೇಕು ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಹಾಗೂ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಆಡಳಿತ ಮಂಡಳಿ ಸದಸ್ಯ ಸೈಯದ್ ಮುಹಮ್ಮದ್ ಬ್ಯಾರಿ ಕರೆ ನೀಡಿದರು.
ರವಿವಾರ ನಗರದ ಎಚ್.ಬಿ.ಆರ್.ಬಡಾವಣೆಯಲ್ಲಿರುವ ಬ್ಯಾರೀಸ್ ಸೌಹಾರ್ದ ಭವನದಲ್ಲಿ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಆಯೋಜಿಸಲಾಗಿದ್ದ 2026ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಸಮುದಾಯದ ಹೆಣ್ಣು ಮಕ್ಕಳು ಶೈಕ್ಷಣಿಕ ರಂಗದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು. ಅದೇ ರೀತಿ ಗಂಡು ಮಕ್ಕಳು ಸಹ ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕು. ಇಂದು ಸಮಾಜದಲ್ಲಿ ಹುಡುಗರು ಶಿಕ್ಷಣದಿಂದ ವಿಮುಖರಾಗಿ ದುಶ್ಚಟಗಳಿಗೆ ದಾಸರಾಗುತ್ತಿರುವುದು ನಾವು ನೋಡುತ್ತಿದ್ದೇವೆ. ಹೆಣ್ಣು ಮಕ್ಕಳು ಈ ಪಿಡುಗಿಗೆ ಕಡಿವಾಣ ಹಾಕಲು ಪ್ರಯತ್ನಿಸಬೇಕು ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.
ನಿಮ್ಮ ಕುಟುಂಬ, ನಿಮ್ಮ ನೆರೆಹೊರೆಯವರು, ಸಂಬಂಧಿಕರಲ್ಲಿರುವ ಎಲ್ಲ ಯುವಕರು ಉನ್ನತ ಶಿಕ್ಷಣ ಪಡೆಯುವಂತೆ ಆಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದಿರುತ್ತಾರೆ. ಆದರೆ, ಅವರನ್ನು ವಿವಾಹವಾಗಲು ಬಯಸುವ ಹುಡುಗ ಶಿಕ್ಷಣದಲ್ಲಿ ಹಿಂದುಳಿದಿರುತ್ತಾನೆ. ಆದುದರಿಂದ, ಈ ಬಗ್ಗೆ ಹೆಣ್ಣು ಮಕ್ಕಳು ಗಮನ ಹರಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಶೇ.90-95ರಷ್ಟು ಅಂಕಗಳನ್ನು ಪಡೆದು ಪುರಸ್ಕಾರ ಸ್ವೀಕರಿಸಿದ ಹೆಣ್ಣು ಮಕ್ಕಳು ತಮ್ಮ ನೆರೆ ಹೊರೆಯಲ್ಲಿರುವ ಶೇ.50-60ರಷ್ಟು ಅಂಕಗಳನ್ನು ಪಡೆದಿರುವಂತಹ 10 ಜನರನ್ನು ಗುರುತಿಸಿ ಒಂದು ಗುಂಪು ಮಾಡಿ, ಅವರ ಶೈಕ್ಷಣಿಕ ಪ್ರಗತಿಗೆ ಕೊಡುಗೆ ನೀಡಿದರೆ, ಭವಿಷ್ಯದಲ್ಲಿ ನಿಮ್ಮ ಅಂಕಗಳು ಶೇ.100ರಷ್ಟು ತಲುಪಬಹುದು. ನಿಮ್ಮ ಗುರಿ ಅತ್ಯಂತ ಸ್ಪಷ್ಟ ಹಾಗೂ ನಿಖರವಾಗಿರಬೇಕು ಎಂದು ಅವರು ಕರೆ ನೀಡಿದರು.






