Bengaluru | ಎಸ್ಐಆರ್ ವಿರೋಧಿಸಿ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ

ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ವಿರೋಧಿ ಜಾತ್ಯತೀತ ಪಕ್ಷಗಳು, ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಎಸ್ಐಆರ್ ವಿರೋಧಿಸಿ, ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾರ್ಕಿಕ ವ್ಯತ್ಯಾಸ (ಲಾಜಿಕಲ್ ಡಿಸ್ಕ್ರಿಪೆನ್ಸಿ) ಸಾಫ್ಟ್ ವೇರ್ ಅನ್ನು ಕರ್ನಾಟಕದಲ್ಲಿ ಬಳಸಬಾರದು. ಇದು ಚುನಾವಣಾ ಮ್ಯಾನ್ಯುಯಲ್ನಲ್ಲಿ ಇಲ್ಲ. ಪ್ರಕಟಿತ ಎಸ್ಐಆರ್ ನಿಯಮಗಳಲ್ಲೂ ಇರಲಿಲ್ಲ. ಈ ಸಾಫ್ಟ್ ವೇರ್ ಯಾವುದೇ ವಿಶ್ವಾಸಾರ್ಹ ಸಂಸ್ಥೆಯಿಂದ ಪರೀಕ್ಷಿಸಲ್ಪಟ್ಟು, ಅನುಮೋದನೆ ಪಡೆದಿಲ್ಲ ಎಂದು ಪ್ರತಿಭಟನಾನಿರತರು ತಿಳಿಸಿದರು.
ಕರಡು ಮತದಾರರ ಪಟ್ಟಿಯನ್ನು ‘ಗ್ರಾಮ, ವಾರ್ಡ್ ಸಭೆ’ಗಳಲ್ಲಿ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಬೇಕು. (ಚುನಾವಣಾ ಆಯೋಗದ ಮ್ಯಾನ್ಯೂಯಲ್ನಲ್ಲಿ ತಿಳಿಸಿದಂತೆ, ಗ್ರಾಮ, ವಾರ್ಡ್ ಪ್ರದೇಶದ ಸಭೆಗಳನ್ನು ಕರೆದು, ಕರಡು ಮತದಾರರ ಪಟ್ಟಿಯಲ್ಲಿನ ಆ ಪ್ರದೇಶದ ಭಾಗವನ್ನು ಓದಬೇಕು. ಮತದಾರರ ಪಟ್ಟಿಯಲ್ಲಿ ಆಗಿರುವ ಸೇರ್ಪಡೆ ಹಾಗೂ ನಿರಾಕರಣೆಯನ್ನು ಗಮನಕ್ಕೆ ತಂದು ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ, ಆಕ್ಷೇಪಣೆಗಳನ್ನು ಸಲ್ಲಿಸಲು ಕನಿಷ್ಟ 6 ತಿಂಗಳ ಸಮಯವಕಾಶ ಇರಬೇಕು. ಲಕ್ಷಾಂತರ ಜನರು ಡಿಲೀಟ್ ಆಗಲು ಈ ಪ್ರಕ್ರಿಯೆಯಲ್ಲಿರುವ ಗಡಿಬಿಡಿಯೂ ಒಂದು ಮುಖ್ಯ ಕಾರಣವಾಗಿದೆ. ಜನರ ಬಳಿ ಇರುವ ದಾಖಲೆಗಳನ್ನು ಆಯೋಗ ಒಪ್ಪುತ್ತಿಲ್ಲ. ಆಯೋಗ ಕೇಳುವ ದಾಖಲೆಗಳು ಸಾಮಾನ್ಯವಾಗಿ ಜನರ ಬಳಿ ಇಲ್ಲ. ದಾಖಲೆಗಳನ್ನು ಹೊಂದಿಸಿಕೊಳ್ಳಲು ಸಮಯವಕಾಶ ಬೇಕೇಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ನಾಗೇಶ್ ಅರಳುಕುಪ್ಪೆ, ರವಿ ಮೋಹನ್, ವರದರಾಜೇಂದ್ರ, ಸತ್ಯ ಮತ್ತಿತರರು ಹಾಜರಿದ್ದರು.






