Bengaluru | ಕಾನ್ಸ್ಟೇಬಲ್ ಪರೀಕ್ಷೆಗೆ ಎಂಟು ತಿಂಗಳ ಮಗುವಿನೊಂದಿಗೆ ಬಂದ ತಾಯಿ; ಕಂದನ ಆರೈಕೆ ಮಾಡಿದ ಪೊಲೀಸ್ ಸಿಬ್ಬಂದಿ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಲು ಬಂದ ಬಾಣಂತಿಯೊಬ್ಬರ ಎಂಟು ತಿಂಗಳ ಮಗುವನ್ನು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಮಡಿಲಿಗೆ ತೆಗೆದುಕೊಂಡು, ಜೋಗುಳ ಹಾಡಿ ಆರೈಕೆ ಮಾಡಿರುವ ಘಟನೆ ರವಿವಾರ ನಡೆದಿದ್ದು, ಈ ಮಾನವೀಯತೆಗೆ ನಗರದ ಕೃಷ್ಣಾ ಕಾಲೇಜು ಪರೀಕ್ಷಾ ಕೇಂದ್ರ ಸಾಕ್ಷಿಯಾಗಿದೆ.
ಪರೀಕ್ಷೆ ಬರೆಯಲು ನಗರದ ಕೃಷ್ಣಾ ಕಾಲೇಜಿಗೆ ಅಭ್ಯರ್ಥಿಯೊಬ್ಬರು ತಮ್ಮ 8 ತಿಂಗಳ ಮಗುವಿನೊಂದಿಗೆ ಆಗಮಿಸಿದ್ದರು. ಆದರೆ, ಪರೀಕ್ಷಾ ಕೊಠಡಿಗೆ ಹೋಗುವ ಕ್ಷಣದಲ್ಲಿ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ. ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ಅಳು ನಿಲ್ಲಿಸಿಲ್ಲ. ಪರೀಕ್ಷೆ ಬರೆಯಬೇಕೋ ಅಥವಾ ಮಗುವನ್ನು ನೋಡಿಕೊಳ್ಳಬೇಕೋ ಎಂದು ಸಂಕಟಪಡುತ್ತಿದ್ದ ತಾಯಿಯನ್ನು ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಮಹಿಳಾ ಸಿಬ್ಬಂದಿ ಗಮನಿಸಿದ್ದು, ‘‘ನೀವು ಆರಾಮಾಗಿ ಪರೀಕ್ಷೆ ಬರೆಯಿರಿ, ಮಗುವನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ’’ ಎಂದು ಬಟ್ಟೆ ತೊಟ್ಟಿಲು ಕಟ್ಟಿ ಜೋಗುಳ ಹಾಡಿ ಹಾರೈಕೆ ಮಾಡಿದ್ದಾರೆ. ಇದರಿಂದ ತಾಯಿಯು ನಿರಾಳವಾಗಿ ಪರೀಕ್ಷೆ ಬರೆಯಲು ಸಹಕಾರವಾಗಿದೆ.




