Bengaluru | ಸುಲಿಗೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಬೆಂಗಳೂರು : ರಾತ್ರಿ ವೇಳೆ ಪುಡ್ ಡೆಲಿವರಿ ಹುಡುಗರನ್ನು ಹೆದರಿಸಿ, ಅವರಿಂದ ನಗದು, ಮೊಬೈಲ್ ಫೋನ್ ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿ ಮೂಲದ ಆದೇಶ್(20), ಶ್ರೀನಿವಾಸ್ (21) ಹಾಗೂ ಪುರುಷೋತ್ತಮ (20) ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದ್ದು, ಆರೋಪಿಗಳಿಂದ ಒಟ್ಟು 1.30 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್, 400 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿ-ಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಜು.30ರಂದು ಪುಡ್ ಡೇಲಿವರಿ ಬಾಯ್ ಓರ್ವನು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಬೆಳಗಿನ ಜಾವ ಕಗ್ಗದಾಸಪುರದ 1ನೇ ಕ್ರಾಸ್ ಬಳಿ ಪುಡ್ ಡೆಲಿವರಿ ಮಾಡಿ ವಾಪಸ್ ಬರುತ್ತಿದ್ದ ಪುಡ್ ಡೆಲಿವರಿ ಹುಡುಗನನ್ನು ಯಾರೋ ಮೂವರು ಅಪರಿಚಿತ ವ್ಯಕ್ತಿಗಳು ಹೆದರಿಸಿ, ಆತನಿಂದ 400ರೂ.ನಗದು ಮತ್ತು ಮೊಬೈಲ್ಫೋನ್ ಅನ್ನು ಕಿತ್ತುಕೊಂಡು ಹೋಗಿದ್ದರು. ಈ ಕುರಿತು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆ ನಡೆಸಿ ಮೂವರು ವ್ಯಕ್ತಿಗಳನ್ನು ಬೈರಸಂದ್ರ ಬಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.






