ಉದ್ಯಾನವನಗಳ ತಿದ್ದುಪಡಿ ವಿಧೇಯಕಕ್ಕೆ ಆಕ್ಷೇಪ; ಲಾಲ್ಬಾಗ್ನಲ್ಲಿ ಗ್ರೀನ್ ಪೀಸ್ ಕಾರ್ಯಕರ್ತರ ಧರಣಿ

ಬೆಂಗಳೂರು : ಉದ್ಯಾನವನಗಳ ಶೇ.5ರಷ್ಟು ಭೂಮಿಯನ್ನು ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸಹಿತ ಇತರ ಉದ್ದೇಶಗಳಿಗೆ ವರ್ಗಾಯಿಸಲು ಅವಕಾಶ ಕಲ್ಪಿಸುವ ‘ಸರಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ’ವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಲಾಲ್ಬಾಗ್ನಲ್ಲಿ ‘ಗ್ರೀನ್ ಪೀಸ್ ಇಂಡಿಯಾ’ ವತಿಯಿಂದ ಧರಣಿ ನಡೆಸಲಾಯಿತು.
ಗುರುವಾರ ಭಿತ್ತಿಪತ್ರಗಳನ್ನು ಹಿಡಿದ ಕಾರ್ಯಕರ್ತರು, ‘ಅಸ್ತಿತ್ವದಲ್ಲಿರುವ ಉದ್ಯಾನವನಗಳನ್ನು ಪರಿಸರ ಸಂರಕ್ಷಣೆಯ ಹೊರತಾದ ಉದ್ದೇಶಕ್ಕೆ ಪಾರ್ಕ್ನ ಭೂಮಿ ಬಳಕೆ, ಪರಿವರ್ತನೆ ಅಥವಾ ನಿರ್ಮಾಣ ಕಾರ್ಯಗಳಿಂದ ರಕ್ಷಿಸಬೇಕು. ಎಲ್ಲ ಮೂಲಸೌಕರ್ಯ ಯೋಜನೆಗಳು ಅಸ್ತಿತ್ವದಲ್ಲಿರುವ ಉದ್ಯಾನವನಗಳು ಅಥವಾ ಹಸಿರು ಪ್ರದೇಶಗಳನ್ನು ಹೊರತುಪಡಿಸಿದ ಪರ್ಯಾಯ ಮಾರ್ಗಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ಹಸಿರು ಪ್ರದೇಶದ ಮೇಲೆ ಪರಿಣಾಮ ಬೀರುವ ಯಾವುದೇ ಪ್ರಸ್ತಾವನೆಯನ್ನು ಪರಿಗಣಿಸುವ ಮೊದಲು ಪಾರದರ್ಶಕ ಸಾರ್ವಜನಿಕ ಸಮಾಲೋಚನೆಯನ್ನು ಕಡ್ಡಾಯಗೊಳಿಸಬೇಕು. ಪರಿಸರ, ಸಾಮಾಜಿಕ, ಆರೋಗ್ಯ ಮತ್ತು ಸಾರ್ವಜನಿಕ ಯೋಗಕ್ಷೇಮ ಮೌಲ್ಯಮಾಪನಗಳನ್ನು ಕಡ್ಡಾಯಗೊಳಿಸಬೇಕು. ನಗರ ಯೋಜನೆ ಮತ್ತು ಅಭಿವೃದ್ಧಿಯ ಚೌಕಟ್ಟಿನಲ್ಲಿ ಪಾರ್ಕ್ಗಳು ಮತ್ತು ನಗರ ಹಸಿರು ಪ್ರದೇಶಗಳನ್ನು ಅಗತ್ಯ ಮೂಲಸೌಕರ್ಯಗಳೆಂದು ಗುರುತಿಸಬೇಕು ಎಂದು ಕೋರಿದರು.
ಹಸಿರು ಪ್ರದೇಶವೂ ಮೂಲಸೌಕರ್ಯವೇ. ಅದನ್ನು ಸಾರ್ವಜನಿಕ ಆಸ್ತಿಯಾಗಿ ಮತ್ತು ಎಲ್ಲರಿಗೂ ಸೇರಿರುವ ಸಾಮೂಹಿಕ ಸಂಪತ್ತಾಗಿ ರಕ್ಷಿಸಬೇಕು. ಉದ್ಯಾನವನಗಳ ಕೆಲವು ಭಾಗಗಳನ್ನು ಮೂಲಸೌಕರ್ಯ ಯೋಜನೆಗಳಿಗೆ ಬಳಸಲು ಅವಕಾಶ ನೀಡುವ ಸಂಪುಟದ ನಿರ್ಧಾರವನ್ನು ವಿರೋಧಿಸುತ್ತೇವೆ ಎಂದು ಅವರುಗಳು ತಿಳಿಸಿದರು.






