Bengaluru | ಅರ್ಹ ಫಲಾನುಭವಿಗಳಿಗೆ ಬಾಕಿ ಸಹಿತ ಪಿಂಚಣಿ ಪಾವತಿಗೆ ಆಗ್ರಹ

ಬೆಂಗಳೂರು : ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ವೃದ್ಧರು, ವಿಧವೆಯರು, ವಿಶೇಷಚೇತನರು, ಅವಿವಾಹಿತ ಮಹಿಳೆಯರು ಹಾಗೂ ತೃತೀಯ ಲಿಂಗಿಗಳ ಪಿಂಚಣಿ ಸ್ಥಗಿತಗೊಳಿಸಿರುವುದು ಖಂಡನೀಯ. ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಹಳೆಯ ಬಾಕಿಯೊಂದಿಗೆ ಕೂಡಲೇ ಅವರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಜ್ಞಾನಮೂರ್ತಿ ಆಗ್ರಹಿಸಿದ್ದಾರೆ.
ಗುರುವಾರ ಫ್ರೀಡಂಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವವರ ಪೈಕಿ ಲಕ್ಷಾಂತರ ಮಂದಿ ಅರ್ಹರಲ್ಲ ಎಂಬ ಕಾರಣ ನೀಡಿ, ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ತಿಂಗಳಿಂದ ಪಿಂಚಣಿ ಸ್ಥಗಿತಗೊಂಡಿದ್ದು, ಇದರಿಂದ ನೈಜ ಹಾಗೂ ಅರ್ಹ ಫಲಾನುಭವಿಗಳೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಪಿಂಚಣಿಯನ್ನೇ ತಮ್ಮ ಜೀವನಾಧಾರವಾಗಿ ನಂಬಿಕೊಂಡಿರುವ ವೃದ್ಧರು, ವಿಧವೆಯರು ಮತ್ತು ಇತರ ದುರ್ಬಲ ವರ್ಗದ ಜನರು ಔಷಧಿ ಹಾಗೂ ಆಸ್ಪತ್ರೆ ವೆಚ್ಚಗಳಿಗೂ ಇದೇ ಹಣವನ್ನು ಅವಲಂಬಿಸಿದ್ದಾರೆ. ಪಿಂಚಣಿ ಸ್ಥಗಿತದಿಂದ ಅವರ ದೈನಂದಿನ ಬದುಕು ದುಸ್ತರವಾಗಿದೆ. ರಾಜ್ಯಾದ್ಯಂತ ಸುಮಾರು 18ಲಕ್ಷ ಫಲಾನುಭವಿಗಳನ್ನು ‘ಸಂಶಯಾಸ್ಪದ’ ಎಂದು ಗುರುತಿಸಿರುವ ಸರಕಾರ, ಸೂಕ್ತ ದಾಖಲೆಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸುವಂತೆ ಸೂಚಿಸಿದೆ ಎಂದು ಜ್ಞಾನಮೂರ್ತಿ ಹೇಳಿದರು.
ದಾಖಲೆ ಸಲ್ಲಿಕೆಯ ಗಡುವನ್ನು ವಿಸ್ತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, ಮರುಪರಿಶೀಲನಾ ಪ್ರಕ್ರಿಯೆಯಿಂದ ಅರ್ಹ ಫಲಾನುಭವಿಗಳಿಗೆ ಆಗುತ್ತಿರುವ ತೊಂದರೆಗಳನ್ನು ತಕ್ಷಣ ನಿವಾರಿಸಬೇಕು. ಬಿಪಿಎಲ್ ಪಡಿತರ ಚೀಟಿಯ ಮಾನದಂಡಕ್ಕೆ ಅನುಗುಣವಾಗಿ ಪಿಂಚಣಿಯನ್ನು ಒದಗಿಸಬೇಕು. ಆದಾಯ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆಯಲು ವೃದ್ಧರು ತಾಲೂಕು ಕಚೇರಿಗಳ ಮುಂದೆ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳ ಮೇಲಿರುವ ಹೆಚ್ಚುವರಿ ಕೆಲಸದ ಒತ್ತಡದಿಂದಲೂ ದಾಖಲೆಗಳ ವಿತರಣೆ ವಿಳಂಬವಾಗುತ್ತಿದೆ ಎಂದು ಅವರು ವಿವರಿಸಿದರು.
ಸರಕಾರದ ಆಡಳಿತಾತ್ಮಕ ಲೋಪ ಅಥವಾ ಅವ್ಯವಹಾರಗಳಿಗೆ ಬಡ ಜನರನ್ನು ಬಲಿಪಶು ಮಾಡುವುದು ಯಾವ ನ್ಯಾಯ? ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಕೋಟ್ಯಂತರ ರೂ.ರಿಯಾಯಿತಿಗಳನ್ನು ನೀಡುವ ಸರಕಾರವು ಬಡವರಿಗೆ ದೊರೆಯುವ ಅಲ್ಪ ಪ್ರಮಾಣದ ಸಾಮಾಜಿಕ ಭದ್ರತಾ ನೆರವಿಗೂ ನೂರಾರು ನಿಯಮಗಳನ್ನು ವಿಧಿಸುತ್ತಿರುವುದು ಖಂಡನೀಯ. ಪಿಂಚಣಿ ಮರುಪರಿಶೀಲನಾ ಕಾರ್ಯದ ಪ್ರತಿಯೊಂದು ಹಂತಕ್ಕೂ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಮರುಪರಿಶೀಲನಾ ಪ್ರಕ್ರಿಯೆ ಮತ್ತು ಸಲ್ಲಿಸಬೇಕಾದ ದಾಖಲೆಗಳ ಕುರಿತು ಪ್ರತಿಯೊಬ್ಬ ನೈಜ ಫಲಾನುಭವಿಗೂ ಸ್ಪಷ್ಟ ಮಾಹಿತಿ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಜ್ಞಾನಮೂರ್ತಿ ಒತ್ತಾಯಿಸಿದರು.
ಹೋರಾಟದಲ್ಲಿ ಎಸ್ಯುಸಿಐ ಮುಖಂಡರಾದ ಜಯಣ್ಣ, ಹೇಮಾವತಿ, ಮತ್ತು ಐಶ್ವರ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.






