ಬೆಂಗಳೂರು: ಸರಕಾರಿ ಮಹಿಳಾ ಅಧಿಕಾರಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ವ್ಯಕ್ತಿಯ ಬಂಧನ
ಬೆಂಗಳೂರು: ಸರಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳ ಬಗ್ಗೆ ಅನುಮಾನಾಸ್ಪದವಾಗಿ ಮಾಹಿತಿ ಕಲೆಹಾಕಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಇಲ್ಲಿನ ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಆರೋಪಿ ಗೋಪಾಲಸ್ವಾಮಿ ವಿರುದ್ಧ ಮಹಿಳಾ ಅಧಿಕಾರಿಯೊಬ್ಬರು ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪಿ ನಿವೃತ್ತ ಅಧಿಕಾರಿಯೊಬ್ಬರ ಪುತ್ರ ಎಂಬುದು ಪತ್ತೆಯಾಗಿದೆ. ಆರೋಪಿಯ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿಯವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಆರೋಪಿ ವಿಕ್ರಂ ಗೋಪಾಲಸ್ವಾಮಿ ಎಂಬುವರು ವಿಧಾನಸೌಧ ಹಾಗೂ ಇತರೆ ಸರಕಾರಿ ಇಲಾಖೆಗಳಲ್ಲಿ ಮಹಿಳಾ ಅಧಿಕಾರಿಗಳ ಮಾಹಿತಿ ಕಲೆಹಾಕುತ್ತಿದ್ದರು ಎಂದು ತಿಳಿದು ಬಂದಿದೆ.
ಮತ್ತೆ ಕೆಲವು ಕಡೆ ಆರೋಪಿಯು ತಾನು ಕಂದಾಯ ಸಚಿವರ ಆಪ್ತ ಸಹಾಯಕ ಎಂದು ಹೇಳಿಕೊಂಡಿದ್ದಾನೆ. ಡಿಜಿಪಿ ಕಚೇರಿಯಿಂದ ಮತ್ತು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಸರಕಾರಿ ಕಚೇರಿಗಳಿಗೆ ಕರೆ ಮಾಡುತ್ತಿದ್ದ ಎಂಬುದಾಗಿ ಗೊತ್ತಾಗಿದೆ.