ಬೆಂಗಳೂರು : ಸಹೋದರಿಯ ನಿಶ್ಚಿತಾರ್ಥ ಬರಲಿಲ್ಲವೆಂದು ಪತ್ನಿಗೆ ಚಾಕು ಇರಿದ ಪತಿಯ ಬಂಧನ

ಬೆಂಗಳೂರು: ಸಹೋದರಿಯ ನಿಶ್ಚಿತಾರ್ಥಕ್ಕೆ ಬರಲಿಲ್ಲವೆಂದು ಹೆಂಡತಿಗೆ ಚಾಕು ಇರಿದಿದ್ದ ಗಂಡನನ್ನು ಇಲ್ಲಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಪತ್ನಿ ದಿವ್ಯಶ್ರೀ(26)ಗೆ ಚಾಕು ಇರಿದಿದ್ದ ಪತಿ ಜಯಪ್ರಕಾಶ್(32) ಎಂಬುವರನ್ನು ಬಂಧಿಸಲಾಗಿದೆ. ಫೆಬ್ರವರಿ 15ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸುಂಕದಕಟ್ಟೆಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿಯ ಮನೆಯಲ್ಲಿ ಘಟನೆ ನಡೆದಿತ್ತು.
ಪೋಷಕರ ವಿರೋಧದ ನಡುವೆಯೂ ಆರೋಪಿ ಜಯಪ್ರಕಾಶ್ ಹಾಗೂ ದಿವ್ಯಶ್ರೀ ಇಬ್ಬರೂ ಪರಸ್ಪರ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಬಳಿಕ ಬೆಂಗಳೂರಿನ ಮೂಡಲಪಾಳ್ಯದಲ್ಲಿ ವಾಸವಾಗಿದ್ದರು. ಗಂಡ ಜಯಪ್ರಕಾಶನಿಗೆ ಅನಾರೋಗ್ಯದ ಸಮಸ್ಯೆಯಿದ್ದ ಕಾರಣ ಮನೆಯ ಸಂಪೂರ್ಣ ಖರ್ಚು ವೆಚ್ಚಗಳನ್ನು ದಿವ್ಯಶ್ರಿಯೇ ನೋಡಿಕೊಳ್ಳುತ್ತಿದ್ದರು. ನಂತರ ದಂಪತಿ ಸುಂಕದಕಟ್ಟೆಗೆ ವಾಸ ಬದಲಾಯಿಸಿದ್ದರು.
ಫೆಬ್ರವರಿ 15ರಂದು ತನ್ನ ತಂಗಿಯ ಎಂಗೇಜ್ಮೆಂಟ್ಗೆ ಬರಲಿಲ್ಲ ಎಂದು ಜಗಳ ಆರಂಭಿಸಿದ್ದ ಜಯಪ್ರಕಾಶ್, ದಿವ್ಯಶ್ರಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈ ವೇಳೆ ದಿವ್ಯಶ್ರಿ ಕಾಲಿಗೆ ಚಾಕು ಇರಿದ ಗಾಯಗಳಾಗಿದ್ದವು. ಬಳಿಕ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ದಿವ್ಯಶ್ರಿ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಜಯಪ್ರಕಾಶನನ್ನು ಬಂಧಿಸಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.





