ಬೆಂಗಳೂರು: ಕರವೇ ನಾರಾಯಣ ಗೌಡರ ಬಂಧನಕ್ಕೆ ಕಸಾಪ ಖಂಡನೆ
ಬೆಂಗಳೂರು: ಕನ್ನಡ ನಾಮಫಲಕಗಳ ವಿರುದ್ಧದ ಪ್ರತಿಭಟನೆ ಸಂಬಂಧದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರನ್ನು ಪೊಲೀಸರು ವಿನಾಕರಣ ಬಂಧನಕ್ಕೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಕಾರಣವಾಗಿರುವುದು ಖಂಡನೀಯ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ.
ಈ ಪ್ರತಿಭಟನೆಯು ವಾಣಿಜ್ಯೋದ್ಯಮ, ಬ್ಯಾಂಕ್, ಅಂಗಡಿಗಳು, ಮಾಲ್ಗಳು, ಹೋಟಲ್ ಮೊದಲಾದ ಸಂಸ್ಥೆಗಳಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯೇ ಇರಬೇಕು ಎನ್ನುವ ರಾಜ್ಯ ಸರಕಾರದ ನಿಯಮದ ಜಾರಿಗಾಗಿ ಒತ್ತಾಯಿಸಿದ್ದು, ಕಾನೂನು ಸಮ್ಮತವೇ ಆಗಿದೆ. ಈ ಆಂದೋಲನದ ಕುರಿತು ಟಿ.ಎ.ನಾರಾಯಣಗೌಡರು ಸಾಕಷ್ಟು ಮುಂಚೆಯೇ ಸಾಮಾಜಿಕ ಜಾಲತಾಣ ಕರಪತ್ರ, ಜಾಹಿರಾತುಗಳ ಮೂಲಕ ಪ್ರಕಟಣೆಯನ್ನು ನೀಡಿದ್ದರು. ಹೀಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಪ್ರತಿಭಟನೆ ಅನಿವಾರ್ಯತೆಗೆ ಸಿಲುಕಿಸಿ ಈಗ ಬಂಧನಕ್ಕೆ ಕಾರಣವಾಗಿರುವುದು ಕನ್ನಡ ನಾಮಫಲಕಗಳನ್ನು ಹಾಕದೆ ಇದ್ದರೂ ನಡೆಯುತ್ತದೆ ಎನ್ನುವ ಪರಭಾಷಿಕರ ಉಡಾಫೆ ಧೋರಣೆಯನ್ನು ಬೆಂಬಲಿಸಿದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಮತ್ತು ಪೊಲೀಸರು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಕಾರರ ವಿಷಯದಲ್ಲಿ ಸಂವೇದನಾಶೀಲವಾಗಿ ವರ್ತಿಸಬಹುದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತು ಕರ್ನಾಟಕ ರಾಜ್ಯ ವಾಣಿಜ್ಯ ಮಹಾಮಂಡಳಿಯ ನೇತೃತ್ವದಲ್ಲಿ ದುಂಡು ಮೇಜಿನ ಸಭೆಯನ್ನು ಮೊದಲೇ ನಡೆಸಿದ್ದರೆ ಕರವೇ ಪ್ರತಿಭಟನೆಯು ನಡೆಯುತ್ತಲೇ ಇರಲಿಲ್ಲ. ಆಗ ಸರಕಾರವು ಸ್ಪಷ್ಟವಾಗಿ ಕನ್ನಡಿಗರ ಪರವಾಗಿದೆ ಎನ್ನುವ ಸಂದೇಶವು ಹೋಗುತ್ತಿತ್ತು. ಆದರೆ ಈ ದಾರಿಯನ್ನು ತುಳಿಯದೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಬಂಧನಕ್ಕೆ ಮುಂದಾಗಿರುವುದರಿಂದ ಪರಭಾಷಿಕರ ಪುಂಡಾಟಕ್ಕೆ ಬೆಂಬಲ ನೀಡಿದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ಆಕ್ರೋಶವು ಕಟ್ಟೆಯೊಡೆಯುವ ಮುನ್ನ ಸರಕಾರವು ಟಿ.ಎ.ನಾರಾಯಣ ಗೌಡರನ್ನು ಮತ್ತು ಬಂಧಿತ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಮಹೇಶ ಜೋಶಿ ಪ್ರಕಟನೆ ಮೂಲಕ ಆಗ್ರಹಿಸಿದ್ದಾರೆ.