ಬೆಂಗಳೂರು | ಪತ್ನಿಯ ಹತ್ಯೆಗೈದು ಕೃತ್ಯ ಮರೆಮಾಚಲು ಯತ್ನಿಸಿದ ಪ್ರಕರಣ: ಪತಿಯ ಬಂಧನ

ಬೆಂಗಳೂರು, ಅ.19: ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿ ಪತ್ನಿಯನ್ನು ಹತ್ಯೆಗೈದು ಬಳಿಕ ಕೃತ್ಯ ಮರೆ ಮಾಚಲು ಯತ್ನಿಸಿದ ಪ್ರಕರಣದಡಿ ಪತಿಯನ್ನು ಇಲ್ಲಿನ ಹೆಬ್ಬಗೋಡಿ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ರೇಷ್ಮಾ(32) ಹತ್ಯೆಗೊಳಗಾದವರು. ಹತ್ಯೆ ಮಾಡಿದ ಆರೋಪದಡಿ ಪತಿ ಪ್ರಶಾಂತ್(25) ಎಂಬಾತನನ್ನು ಬಂಧಿಸಲಾಗಿದೆ. ರೇಷ್ಮಾ ಸಹೋದರಿ ರೇಣುಕಾ ಎಂಬುವರು ನೀಡಿದ ದೂರಿನ ಮೇರೆಗೆ ಹತ್ಯೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೆಬ್ಬಗೋಡಿಯ ಮರಗೊಂಡಹಳ್ಳಿ ನಿವಾಸಿ ರೇಷ್ಮಾ ಅವರು 15 ವರ್ಷಗಳ ಹಿಂದೆ ಸುರೇಂದರ್ ಎಂಬುವರೊಂದಿಗೆ ಮದುವೆ ಮಾಡಿಕೊಂಡಿದ್ದರು. ವಿವಾಹವಾದ ಒಂದೇ ವರ್ಷದಲ್ಲಿ ಮೊದಲ ಪತಿ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದ. ಈ ದಂಪತಿಗೆ 14 ವರ್ಷದ ಮಗಳಿದ್ದಾರೆ.
9 ತಿಂಗಳ ಹಿಂದೆ ರೇರೇಷ್ಮಾ ಗೆ ಸಾಮಾಜಿಕ ಜಾಲತಾಣದ ಮುಖಾಂತರ ಪ್ರಶಾಂತ್ ಎಂಬಾತನ ಪರಿಚಯವಾಗಿದೆ. ಕಾಲಕ್ರಮೇಣ ಪ್ರೀತಿಗೆ ತಿರುಗಿ ಇಬ್ಬರು ಮದುವೆ ಮಾಡಿಕೊಂಡಿದ್ದರು. ಮದುವೆ ಬಳಿಕ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಕೆಲ ತಿಂಗಳಿಂದ ಪತ್ನಿಗೆ ಬೇರೆ ಸಂಬಂಧ ಇರುವುದಾಗಿ ಶಂಕಿಸಿ ಪ್ರಶಾಂತ್ ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅ.15ರಂದು ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ. ಎಂದಿನಂತೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಗಳು ಶೌಚಾಲಯದಲ್ಲಿ ಬಾಗಿಲು ಚಿಲಕ ಹಾಕಿರುವುದನ್ನು ಗಮನಿಸಿ ತೆಗೆದು ಒಳ ಹೋದಾಗ ರೇಷ್ಮಾ ಅಸ್ವಸ್ಥತೆಯಿಂದ ಬಿದ್ದಿರುವುದನ್ನು ನೋಡಿ ಆಂತಕಗೊಂಡು ತನ್ನ ದೊಡ್ಡಮ್ಮ ರೇಣುಕಾಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು.
ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಮಾರ್ಗ ಮಧ್ಯೆ ರೇಷ್ಮಾ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಆರೋಪಿ ಪ್ರಶಾಂತ್ನನ್ನು ಪ್ರಶ್ನಿಸಿದಾಗ ಶೌಚಾಲಯದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರಬಹುದು ಎಂಬುದಾಗಿ ಕಥೆ ಕಟ್ಟಿದ್ದ. ಇದರಿಂದ ಅನುಮಾನಗೊಂಡು ಬಾಲಕಿಯನ್ನು ಪ್ರಶ್ನಿಸಿದಾಗ ಬೇರೆ ಗಂಡಸಿನೊಂದಿಗೆ ಮಾತನಾಡಿದ್ದನ್ನು ಅಪ್ಪ ಕೋಪಿಸಿ ಗಲಾಟೆ ಮಾಡಿದ್ದರು ಎಂದು ಹೇಳಿದ್ದಳು. ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.







