Bengaluru | ಅಕ್ರಮ ವಲಸಿಗರ ವಿರುದ್ಧ ಪೊಲೀಸರ ಕಾರ್ಯಾಚರಣೆ: ಓರ್ವ ನೈಜೀರಿಯಾ ಪ್ರಜೆ ಸಹಿತ 11 ಸಂಶಯಾಸ್ಪದ ವ್ಯಕ್ತಿಗಳು ಪತ್ತೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಫೆ.26: ನಗರದ ಪೂರ್ವ ವಿಭಾಗದ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಚನ್ನಸಂದ್ರ ಹಾಗೂ ಕಲ್ಕೆರೆ ಪ್ರದೇಶದ ವಿವಿಧೆಡೆ ಅಂಗಡಿ, ಗೋದಾಮು ಹಾಗೂ ಮನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಪೊಲೀಸರು ಗುರುವಾರ ತಪಾಸಣೆ ನಡೆದಿದ್ದು, ಈ ವೇಳೆ ಓರ್ವ ನೈಜೀರಿಯಾ ಪ್ರಜೆ ಸಹಿತ 11 ಮಂದಿ ಸಂಶಯಾಸ್ಪದ ಅಕ್ರಮ ವಲಸೆ ನಿವಾಸಿಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ತಪಾಸಣೆ ವೇಳೆ 1 ಸಾವಿರಕ್ಕೂ ಅಧಿಕ ಸಂಶಯಾಸ್ಪದ ವ್ಯಕ್ತಿಗಳ ಆಧಾರ್ ಕಾರ್ಡ್, ವಿದ್ಯಾಭ್ಯಾಸ ಮಾಡಿರುವ ಮೂಲ ಅಂಕಪಟ್ಟಿ, ಬ್ಯಾಂಕ್ ಖಾತೆ, ಪಾಸ್ಪೋರ್ಟ್ ವಿವಿಧ ದಾಖಲೆಗಳು ಹಾಗೂ ಫೋನ್ ಕರೆ ಮತ್ತು ಸಕ್ರಿಯರಾಗಿರುವ ವಾಟ್ಸಪ್ ಗ್ರೂಪ್ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು, ಪತ್ತೆಯಾಗಿರುವ ಅಕ್ರಮ ನಿವಾಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತ ಡಾ.ವಿಕ್ರಂ ಅಮಟೆ ಹಾಗೂ ಎಸಿಪಿ ಉಮಾಶಂಕರ್ ನೇತೃತ್ವದಲ್ಲಿ ನಡೆಸಲಾಗಿದೆ.




