Bengaluru | ಖೋಟಾ ನೋಟುಗಳನ್ನು ತಯಾರಿಸಿ ಚಲಾವಣೆ: ಇಬ್ಬರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ | PC : AI
ಬೆಂಗಳೂರು : ಖೋಟಾ ನೋಟುಗಳನ್ನು ತಯಾರಿಸಿ, ಚಲಾವಣೆ ಮಾಡುತ್ತಿದ್ದ ಹೊರ ರಾಜ್ಯದ ಓರ್ವ ವ್ಯಕ್ತಿ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದು, 500ರೂ. ಮುಖಬೆಲೆಯ 338ನೋಟುಗಳು, 1 ಜೆರಾಕ್ಸ್ ಮೆಷನ್, 1 ಲ್ಯಾಪ್ಟಾಪ್, 1 ಕಾರು ಮತ್ತು 3 ಮೊಬೈಲ್ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಚೆನ್ನೈನ ಬಾಲಾಜಿನಗರದ ವೆಂಕಟ ಸುಬ್ರಮಣಿ(41) ಹಾಗೂ ಪಿರಿಯಾ ಪಟ್ಟಣ ತಾಲೂಕಿನ ಹುಣಸ ಕುಪ್ಪೆಯ ಅರವಿಂದ(47) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಿಡಿಎ ಅಪಾರ್ಟಮೆಂಟ್ ವೊಂದರಲ್ಲಿ ಬಾಡಿಗೆದಾರನೊಬ್ಬ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದಾನೆಂದು ಖಚಿತ ಮಾಹಿತಿಯೊಂದು ಪೊಲೀಸರಿಗೆ ದೊರೆತ್ತಿತ್ತು. ಈ ಬಗ್ಗೆ ನಿಖರ ಮಾಹಿತಿಯನ್ನಾಧರಿಸಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಓರ್ವ ಆರೋಪಿಯನ್ನು ಕೆಂಚನಪುರ ಕ್ರಾಸ್ ಬಳಿ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಗಿತ್ತು. ಆರೋಪಿಯು ಖೋಟಾ ನೋಟುಗಳನ್ನು ಮುದ್ರಣ ಮಾಡಿ ಹಾಗೂ ಚೆನ್ನೈನಲ್ಲಿರುವ ಓರ್ವ ಸಹಚರನಿಗೆ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಈ ಇಬ್ಬರು ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




