ಓಲೈಕೆ ಪದದ ಅರ್ಥವೇ ಗೊತ್ತಿಲ್ಲದ ಬಿಜೆಪಿ ನಾಯಕರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ: ಕೆಪಿಸಿಸಿ ವಕ್ತಾರ ಡಾ.ರಝಾಕ್
"ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಅನುದಾನ ಘೋಷಣೆ ಸ್ವಾಗತಾರ್ಹ"

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಯ್ಯನವರು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಂತ ಹಂತವಾಗಿ 10 ಸಾವಿರ ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿರುವುದನ್ನು ಸ್ವಾಗತಿಸುತ್ತೇವೆ ಎಂದು ಕೆಪಿಸಿಸಿ ಮಾದ್ಯಮ ವಿಭಾಗದ ರಾಜ್ಯ ವಕ್ತಾರ ಡಾ.ರಝಾಕ್ ಉಸ್ತಾದ ಹೇಳಿದರು.
2023-24ನೇ ಸಾಲಿನಲ್ಲಿ ಕೇವಲ 2101 ಕೋಟಿ ರೂ. ಅನುದಾನ ನೀಡಲಾಗಿದೆ. ಅಲ್ಲದೇ ಮುಖ್ಯಮಂತ್ರಿಯವರ ಹೇಳಿಕೆಯನ್ನು ಬಿಜೆಪಿ ನಾಯಕರು ಅಲ್ಪಸಂಖ್ಯಾತರ ತುಷ್ಠೀಕರಣವೆಂದು ಆರೋಪ ಮಾಡುತ್ತಿರುವುದನ್ನು ತೀರ್ವವಾಗಿ ಖಂಡಿಸುತೇನೆ. ತುಷ್ಠೀಕರಣ ಅಥವಾ ಓಲೈಕೆ ಪದದ ಅರ್ಥವೇ ಗೊತ್ತಿಲ್ಲದ ಬಿಜೆಪಿ ನಾಯಕರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2019ರಲ್ಲಿ ರಾಜ್ಯ ಸರಕಾರದ ಬಜೆಟ್ ಗಾತ್ರ 2,45000 ಕೋಟಿ ರೂ. ಇತ್ತು. ಅಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ಸುಮಾರು 2800 ಕೋಟಿ ರೂ. ಇತ್ತು. ಅದನ್ನು ಬಿಜೆಪಿ ನಾಯಕರು 1100 ಕೋಟಿ ರೂ. ವರೆಗೆ ಕಡಿತಗೊಳಿಸಿ ಇಲಾಖೆಯ ಸುಮಾರು 16 ಯೋಜನೆಗಳನ್ನು ರದ್ದುಗೊಳಿಸಿದರು, ಮುಸ್ಲಿಮರ ಮೀಸಲಾತಿ ಸಂವಿಧಾನಬಾಹಿರವಾಗಿ ರದ್ದುಗೊಳಿಸಿ ಚುನಾವಣೆಯಲ್ಲಿ ಬಹಿರಂಗ ಬೆನ್ನುತಟ್ಟಿಕೊಂಡರು, ಇದರಿಂದ ರಾಜ್ಯದ ಜನತೆ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ.ಒಂದು ಸರಕಾರ ಎಲ್ಲರನ್ನೂ ಒಂದೇ ರೀತಿ ನೋಡಬೇಕು, ಓಲೈಕೆ ಮಾಡಬಾರದೆಂದು ಯಡಿಯೂರಪ್ಪನವರು ಹೇಳಿರುವದು ಅವರ ಸರಕಾರದಲ್ಲಿ ಅಲ್ಪಸಂಖ್ಯಾತರ ವಿರುದ್ದ ನಡೆದುಕೊಂಡಾಗ ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಅನುದಾನ ಕಡಿತಗೊಳಿಸಿದಾಗ ಒಂದೇ ರೀತಿ ನೋಡುವ ಪರಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಬೇಕಾಗುತ್ತದೆ ಎಂದರು.
ಬಿಜೆಪಿ ಸರಕಾರದಲ್ಲಿ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಮುಸ್ಲಿಮ್ ವ್ಯಕ್ತಿಗಳಿಗೆ ಪರಿಹಾರದ ಚೆಕ್ ನೀಡಿ ವಾಪಸ್ ಪಡೆದಿದ್ದು ನೆನಪಿಲ್ಲವೇ, ನರಗುಂದದಲ್ಲಿ ಕೋಮುಗಲಭೆಯಲ್ಲಿ ಮೃತಪಟ್ಟ ಸಮೀರ್ ಕುಟುಂಬಕ್ಕೆ ಪರಿಹಾರ ನೀಡದೇ ಶಿವಮೊಗ್ಗದಲ್ಲಿ ಮೃತಪಟ್ಟ ಹರ್ಷನ ಕುಟುಂಬಕ್ಕೆ ಪರಿಹಾರ ನೀಡಿದಾಗ ನೆನಪಾಗಲಿಲ್ಲವೇ ಯಡಿಯೂರಪ್ಪನವರೇ? ಇನ್ನೂ ಬಿಜೆಪಿ ಸಖ್ಯ ಬೆಳೆಸಿದ ಕುಮಾರಸ್ವಾಮಿಯವರು ಓಲೈಕೆ ರಾಜಕಾರಣದ ಬಗ್ಗೆ ಮಾತನಾಡಿರುವುದು ಅವರ ಜಾತ್ಯಾತೀತ ಮುಖವಾಡ ಕಳಚಿ ಬಿದ್ದಂತಾಗಿದೆ, ಇಲ್ಲಿಯವರೆಗೂ ಕಾಣದ ಓಲೈಕೆ ಈಗ ಮಾತ್ರ ಓಲೈಕೆ ಕಾಣುತ್ತಿರುವುದು ಬಿಜೆಪಿ ನಾಯಕರನ್ನು ಮೆಚ್ಚಿಸುವ ಪ್ರಯತ್ನವೆಂಬಂತೆ ಕಾಣುತ್ತಿದೆ. ನಿಜವಾಗಿಯೂ ಈ ದೇಶದಲ್ಲಿ ಮುಸ್ಲಿಮರ ಓಲೈಕೆ ನಡೆದಿದ್ದರೆ ಮುಸ್ಲಿಮರ ಈಗಿನ ಸ್ಥಿತಿ ಬಿನ್ನವಾಗಿರುತ್ತಿತ್ತು, ಹತ್ತು ಹಲವು ಆಯೋಗಗಳು ನೀಡಿದ ವರದಿಯಂತೆ ಮುಸ್ಲಿಮರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಈಗಲೂ ಅತ್ಯಂತ ಹಿಂದುಳಿದ ಸಮುದಾಯವೆಂದೇ ಪರಿಗಣಿಸಿವೆ, ಅಲ್ಲದೇ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಅತ್ಯಂತ ಹೆಚ್ಚಿರುವುದು ಮುಸ್ಲಿಮ್ ಸಮದಾಯದಲ್ಲೇ ಎನ್ನುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಿವಿಧ ಸಮುದಾಯಗಳಿಗೆ ಪ್ರತ್ಯೇಕ ಕಲ್ಯಾಣ ಇಲಾಖೆಗಳಿವೆ, ಪ್ರತಿಯೊಂದು ಕಲ್ಯಾಣ ಇಲಾಖೆಗಳಿಗೂ ಪ್ರತ್ಯೇಕ ಅನುದಾನವಿದೆ, ಆ ಸಮುದಾಯದ ಕಾರ್ಯಕ್ರಮಕ್ಕೆ ಹೋದಾಗ ಆ ಇಲಾಖೆಯ ಬಗ್ಗೆ ಚರ್ಚೆ ನಡೆಯುತ್ತದೆ, ಅದರ ಅನುದಾನ ಕೊರತೆ ಬಗ್ಗೆ ನಾಯಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಅದರ ಕುರಿತು ಭರವಸೆ ನೀಡಲಾಗುತ್ತದೆ. ಇದು ಎಲ್ಲಾ ಸಮುದಾಯಗಳ ಕಾರ್ಯಕ್ರಮಗಳಲ್ಲಿ ನಡೆಯುವ ಸಹಜ ಪ್ರಕ್ರಿಯೆ, ಅದನ್ನೇ ಬಹಳ ದೊಡ್ಡ ವಿಷಯ ಮಾಡಿ ಒಂದು ಸಮುದಾಯವನ್ನೇ ಗುರಿ ಮಾಡುವುದು ಎಷ್ಟು ಸರಿ. ರಾಜ್ಯದಲ್ಲಿ ಬಜೆಟ್ ಗಾತ್ರ ಹೆಚ್ಚಾದಂತೆ ಇಲಾಖೆಗಳ ಅನುದಾನವೂ ಹೆಚ್ಚಾಗುತ್ತದೆ, ಅದನ್ನೇ ಮುಖ್ಯಮಂತ್ರಿಗಳು ಹೇಳಿದ್ದಾರೆ, ಮುಸ್ಲಿಮರನ್ನು ಟಿಕೀಸುವುದು ಬಿಜೆಪಿಯವರ ಹವ್ಯಾಸವಾಗಿದೆ, ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ, ಇತ್ತೀಚೆಗೆ ತೆಲಂಗಾಣಾ ರಾಜ್ಯದ ಚುನಾವಣೆಯಲ್ಲಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಸರಕಾರ ಆಡಳಿತಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ತೆಗೆಯುತ್ತೇವೆ ಎಂದು ಹೇಳಿದ್ದರು, ಆದರೆ ಆ ರಾಜ್ಯದ ಜನ ಇವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಯವರ ಹೇಳಿಕೆ ಹಿಂದೆ ಅಲ್ಪಸಂಖ್ಯಾತ ಸಮುದಾಯದ ಹಿತ ಕಾಪಾಡುವ ಉದ್ದೇಶವಿದೆ ಹೊರತು ಓಲೈಕೆಯಲ್ಲ ಎನ್ನುವುದು, ಇತರೆ ಸಮುದಾಯದ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ವಿವಿಧ ಭರವಸೆಗಳನ್ನು ನೀಡಿದಂತೆ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿಯೂ ಅನುದಾನ ಹೆಚ್ಚಿಸುವ ಹೇಳಿಕೆ ಹೇಳಿದ್ದಾರೆ ಎನ್ನುವುದು ಬಿಜೆಪಿ ಮತ್ತು ಜನತಾದಳ ಪಕ್ಷದ ನಾಯಕರು ಅರ್ಥಮಾಡಿಕೊಳ್ಳಲಿ ಎಂದು ಹೇಳಿದರು.







