ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ವ್ಯವಸ್ಥೆ ನಾಶ ಮಾಡಿದ್ದಾರೆ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಶೂದ್ರರು, ದಲಿತರು ಬಹಳ ಆಸೆಯನ್ನು ಇಟ್ಟುಕೊಂಡು ಬಿಜೆಪಿಗೆ ಹೋಗಬೇಡಿ. ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆ ಹೊರತು, ನಿಮ್ಮನ್ನು ಶಾಸಕರನ್ನಾಗಿ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ರವಿವಾರ ನಗರದ ಕ್ವೀನ್ಸ್ ರಸ್ತೆಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಮಾಜಿ ಶಾಸಕ ನರೇಂದ್ರಬಾಬು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸ್ವಲ್ಪ ತಡವಾದರೂ ಸೂಕ್ತ ಸ್ಥಾನಮಾನ ಸಿಗುತ್ತದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಲು 53 ವರ್ಷ ಬೇಕಾಯಿತು ಎಂದರು.
2001ರ ಪಾಲಿಕೆ ಚುನಾವಣೆ ವೇಳೆ ರಾಜಾಜಿನಗರದ 10 ವಾರ್ಡ್ ಪೈಕಿ ಕಾಂಗ್ರೆಸ್ 9ರಲ್ಲಿ ಗೆದ್ದಿದ್ದು, ನರೇಂದ್ರ ಬಾಬು ಅವರು ಪಕ್ಷೇತರರಾಗಿ ಗೆದ್ದಿದ್ದರು. ನಾನು ಆಗ ಎಸ್.ಎಂ.ಕೃಷ್ಣ ಅವರಿಗೆ ಹೇಳಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಟ್ಟಾಗ ಶಾಸಕರೂ ಆದರು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಬರುವಾಗ ನೀವು ದೇಶದಲ್ಲಿ ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಏನಾಗಿದೆ ಎಂದು ಆಲೋಚಿಸಿ. ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ ಹೇಗಿರಬೇಕು ಎಂದು ಆಲೋಚಿಸಿ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ವ್ಯವಸ್ಥೆ ನಾಶ ಮಾಡಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು
ಬಿಜೆಪಿ ನಾಯಕರ ಮನೆಗೆ ನೀಟ್ ಪ್ರಶ್ನೆ ಪತ್ರಿಕೆ ಹೋಗುತ್ತದೆ. ಬೇರೆಯವರು 40 ಲಕ್ಷ ರೂ. ನೀಡಿ ಖರೀದಿ ಮಾಡಬೇಕಾಗಿದೆ. ನಾವು ಬಿಜೆಪಿ ತತ್ವ ಸಿದ್ಧಾಂತದ ವಿರುದ್ಧ ಹೋರಾಟ ಮಾಡುವವರು. ಅವರು ಗೆಲ್ಲಬಾರದು ಎಂದು ಹೋರಾಟ ಮಾಡುವವರು. ನೀವು ಹೋರಾಟ ಮಾಡಬೇಕು ಎಂದು ಬಿ.ಕೆ.ಹರಿಪ್ರಸಾದ್ ಕಾರ್ಯಕರ್ತರಿಗೆ ಕರೆ ನೀಡಿದರು.
ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ಏನಾದರೂ ಹಕ್ಕು ಸಿಕ್ಕಿದ್ದರೆ ಅದು ಸಂವಿಧಾನದಿಂದ ಮಾತ್ರ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಏನು ಮಾಡಿದೆ ಎಂದು ಅರಿತು ನಂತರ ಪಕ್ಷಕ್ಕೆ ಬರಬೇಕು ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ನೀವು ಬೆಂಗಳೂರಿನಲ್ಲಿ ಇದ್ದೀರಿ. ಇದು ಸಿಲಿಕಾನ್ ಸಿಟಿ ಆಗುವ ಮುನ್ನ ಇದು ಸಿಲ್ಕ್ ಸಿಟಿ ಆಗಿತ್ತು, ನೆಹರೂ ಅವರು ಟಾಟಾ ಇನ್ಟ್ಸಿಟ್ಯೂಟ್ ಆಫ್ ಸೈನ್ಸ್ ನೀಡಿದಕ್ಕಾಗಿ ಇದು ಸೈನ್ಸ್ ಸಿಟಿ ಆಯಿತು. ಡೈರಿ ಬಂದ ನಂತರ ಮಿಲ್ಕ್ ಸಿಟಿ ಆಯಿತು. ನೆಹರೂ ಅವರು ಎಚ್ಎಎಲ್, ಐಐಟಿ, ಬೆಮೆಲ್ ನಂತಹ 50ಕ್ಕೂ ಹೆಚ್ಚು ಸಾರ್ವಜನಿಕ ಉದ್ದಿಮೆ ಆರಂಭಿಸಿ ಕೈಗಾರಿಕಾ ಶಕ್ತಿ ನೀಡಿದರು ಎಂದು ಬಿ.ಕೆ.ಹರಿಪ್ರಸಾದ್ ವಿವರಿಸಿದರು.
ಪೂರ್ವಜರು ರಕ್ತ ಬೆವರು ಸುರಿಸಿ ದೇಶದಲ್ಲಿ ಉದ್ಯಮಗಳನ್ನು ಕಟ್ಟಿದ್ದರು. ಅವುಗಳನ್ನು ಮಹಾನ್ ಮಾನವ ಎಂದು ಹೇಳಿಕೊಳ್ಳುವ ಸುಳ್ಳಿನ ಸರದಾರ ಒಂದಾದ ಮೇಲೆ ಒಂದರಂತೆ ಮಾರಿಕೊಂಡರು. ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ನಿಮಗೆ ಅವಕಾಶ ನೀಡುವುದು ಕಾಂಗ್ರೆಸ್. 1947ರಲ್ಲಿ 14 ವಿ.ವಿ.ಗಳಿದ್ದವು ಅವುಗಳನ್ನು 600ಕ್ಕೆ ಏರಿಸಿದ್ದು ಕಾಂಗ್ರೆಸ್. ದೇಶದ ಸಾಕ್ಷರತೆ ಪ್ರಮಾಣವನ್ನು ಶೇ.11ರಿಂದ 76ರಷ್ಟು ಏರಿಸಲಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಹಿಂದಿನ 12 ವರ್ಷ ಮಹಾನುಭಾವ ಮಾಡಿದ್ದು, ದ್ವೇಷದ ರಾಜಕಾರಣ. ಯಾರು ಏನು ತಿನ್ನಬೇಕು, ಯಾರು ಯಾವ ಬಟ್ಟೆ ಹಾಕಬೇಕು? ಯಾರು ಯಾವ ದೇವರನ್ನು ಪೂಜಿಸಬೇಕು ಎಂದು ಹೇಳಿಕೊಡಲು ನೀವು ಅವರಿಗೆ ಅಧಿಕಾರ ಕೊಟ್ಟಿದ್ದೀರಾ? ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ನೀವು ಯಾವುದೇ ಧರ್ಮ ಪಾಲಿಸಿ, ಯಾವುದೇ ದೇವರನ್ನು ಪೂಜಿಸಿ. ಸರಕಾರಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಸರಕಾರ ಎಲ್ಲರಿಗೂ ಸೇರಿದ್ದು ಎಂದು ಹೇಳುವ ದೊಡ್ಡ ಗ್ರಂಥವೇ ಸಂವಿಧಾನ. ಇದನ್ನು ಉಳಿಸಿಕೊಂಡು ಹೋಗಿ. ಅಧಿಕಾರದ ಆಸೆಗೆ ಕೆಲವರು ಬಿಜೆಪಿಗೆ ಹೋಗಿರಬಹುದು ಅವರೆಲ್ಲರೂ ನರೇಂದ್ರಬಾಬು ಅವರಂತೆ ವಾಪಸ್ ಬರುತ್ತಾರೆ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಕರ್ನಾಟಕದಲ್ಲಿರುವ 26 ಅಣೆಕಟ್ಟುಗಳ ಪೈಕಿ ಒಂದು ಮಹಾರಾಜರು ಕಟ್ಟಿದ್ದಾರೆ. ಬ್ರಿಟಿಷರು 3 ಅಣೆಕಟ್ಟು ಕಟ್ಟಿದ್ದರೆ, ಉಳಿದ 22 ಅಣೆಕಟ್ಟು ಕಟ್ಟಿರುವುದು ಕಾಂಗ್ರೆಸ್ ಸರಕಾರಗಳು. ಬಿಜೆಪಿಯವರು ಒಂದು ಬಾವಿ ಕೂಡ ತೋಡಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಚಿವೆ ರಾಣಿ ಸತೀಶ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹನುಮಂತರಾಯಪ್ಪ, ಮಾಜಿ ಮೇಯರ್ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
‘ಬಿಜೆಪಿಯ ಹಲಾಲ್, ಹಿಜಾಬ್ ಸೇರಿ ಕೋಮು ಗಲಭೆಯಲ್ಲಿ ಜೈಲಿಗೆ ಹೋಗಿರುವವರು ಶೂದ್ರರು. ಬಿಜೆಪಿ ನಾಯಕರ ಮಕ್ಕಳು ಜೈಲಿಗೆ ಹೋಗಿಲ್ಲ. ಯಡಿಯೂರಪ್ಪ, ಸಿ.ಟಿ.ರವಿ ಮಕ್ಕಳು ಹೋರಾಟ ಮಾಡಿ ಜೈಲಿಗೆ ಹೋಗಲ್ಲ. ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಾರೆ ನಿಮ್ಮ ಮಕ್ಕಳು ಜೈಲಿಗೆ ಸೇರುತ್ತಿದ್ದಾರೆ’ ಎಂದು ಬಿ.ಕೆ.ಹರಿಪ್ರಸಾದ್ ಹರಿಹಾಯ್ದರು.






