ಸದನದಲ್ಲಿ ಡಿ.ಕೆ.ಶಿವಕುಮಾರ್-ಮುನಿರತ್ನ ನಡುವೆ ಆಕ್ಷೇಪಾರ್ಹ ಪದ ಬಳಕೆ: ಸದನದ ಬಾವಿಗಿಳಿದು ಆಡಳಿತ ಪಕ್ಷ ಸದಸ್ಯರ ಧರಣಿ

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಮುನಿರತ್ನ ನಡುವೆ ಪರಸ್ಪರ ವೈಯುಕ್ತಿಕ ನಿಂದನೆ, ಜಟಾಪಟಿ ನಡೆದು ಡಿ.ಕೆ.ಶಿವಕುಮಾರ್ ವಿರುದ್ಧ ಮುನಿರತ್ನ ಬಳಸಿದ ಆಕ್ಷೇಪಾರ್ಹ ಪದದಿಂದ ಆಕ್ರೋಶಗೊಂಡ ಆಡಳಿತ ಪಕ್ಷದ ಸದಸ್ಯರು, ಸ್ಪೀಕರ್ ಪೀಠದ ಮುಂದಿನ ಸದನದ ಬಾವಿಗೆ ಇಳಿದು ಧರಣಿ ನಡೆಸಿದ ಪ್ರಸಂಗ ನಡೆಯಿತು.
ಗುರುವಾರ ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ವಿಚಾರವಾಗಿ ನಡೆದ ಚರ್ಚೆ ಸಂಬಂಧ ಡಿ.ಕೆ.ಶಿವಕುಮಾರ್ ಸುದೀರ್ಘವಾಗಿ ಉತ್ತರ ನೀಡಿದರು. ನಂತರ ಬಿಜೆಪಿ ಶಾಸಕ ಮುನಿರತ್ನ ನನ್ನ ಪ್ರಶ್ನೆಗಳಿಗೆ ಉಪಮುಖ್ಯಮಂತ್ರಿಗಳು ಉತ್ತರ ನೀಡಿಲ್ಲ. ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು. ಆಗ ಸ್ಪೀಕರ್ ಯು.ಟಿ.ಖಾದರ್ ಉತ್ತರ ಮುಗಿದಿದೆ, ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡಿದ್ದೇವೆ. ಈಗ ಚರ್ಚೆಗೆ ಅವಕಾಶ ಇಲ್ಲ ಎಂದು ಉಲ್ಲೇಖಿಸಿದರು.
ಆದರೂ, ಮುನಿರತ್ನ ಅವರು ತಮಗೆ ಉತ್ತರ ನೀಡಲೇಬೇಕೆಂದು ಪಟ್ಟು ಹಿಡಿದರು. ಆಗ ಸ್ಪೀಕರ್ ಸಿಟ್ಟಾಗಿ ಅವಕಾಶ ಇಲ್ಲ ಎಂದರೂ, ಮುನಿರತ್ನ ಅದಕ್ಕೆ ಕಿವಿಗೊಡಲಿಲ್ಲ. ತಮಗೆ ಉತ್ತರ ಬೇಕೇ ಬೇಕು ಎಂದು ಚರ್ಚೆಗೆ ಮುಂದಾದರು. ಆ ಹಂತದಲ್ಲಿ ಬಿಜೆಪಿಯ ಡಾ.ಸಿ.ಎನ್.ಅಶ್ವತ್ ನಾರಾಯಣ ಸೇರಿದಂತೆ ಬಿಜೆಪಿ ಸದಸ್ಯರು ಮುನಿರತ್ನ ಅವರನ್ನು ಸಮಾಧಾನಿಸಿ ಕೂರಿಸಲು ಯತ್ನಿಸಿದಾಗ ಮುನಿರತ್ನ ಅದಕ್ಕೆ ಒಪ್ಪಲಿಲ್ಲ. ಈ ಹಂತದಲ್ಲಿ ಮುನಿರತ್ನ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಳಸಿದ ಪದ ಆಡಳಿತ ಪಕ್ಷದ ಸದಸ್ಯರಲ್ಲಿ ಸಿಟ್ಟು ತರಿಸಿತು.
ಬಳಿಕ ಆಡಳಿತ ಪಕ್ಷದ ಸದಸ್ಯರೆಲ್ಲಾ ಒಮ್ಮೆಗೆ ಎದ್ದುನಿಂತು ಮುನಿರತ್ನ ವಿರುದ್ಧ ಹರಿಹಾಯ್ದರಲ್ಲದೆ, ಬಿಜೆಪಿಯಿಂದ ಉಚ್ಛಾಟಿತರಾಗಿರುವ ಎಸ್.ಟಿ.ಸೋಮಶೇಖರ್ ಸೇರಿದಂತೆ ಬಹುತೇಕ ಆಡಳಿತ ಪಕ್ಷದ ಸದಸ್ಯರು ಸದನದ ಬಾವಿಗಿಳಿದು, ಮುನಿರತ್ನ ಅವರನ್ನು ವಜಾ ಮಾಡಿ, ಅವರು ಉಪಮುಖ್ಯಮಂತ್ರಿಗಳನ್ನು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಧರಣಿ ನಡೆಸಿದರು.
ಆಗ ಸಭಾಧ್ಯಕ್ಷರು ಸದನದಲ್ಲಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ನಿಮ್ಮ ಸ್ಥಳಗಳಿಗೆ ಹೋಗಿ ಎಂದು ಹೇಳಿದರೂ ಅದಕ್ಕೆ ಕಿವಿಗೊಡದ ಆಡಳಿತ ಪಕ್ಷದ ಸದಸ್ಯರು ಮುನಿರತ್ನ ಅವರನ್ನು ವಜಾಗೊಳಿಸಿ, ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಧರಣಿ ಮುಂದುವರೆಸಿದರು.
ಈ ಹಂತದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ‘ಶಿವಕುಮಾರ್ ರವರು ಬೆಂಗಳೂರಿನ ಮೂಲ ಸೌಕರ್ಯದ ಅಭಿವೃದ್ಧಿಗೆ ಉತ್ತರ ಕೊಟ್ಟಿದ್ದಾರೆ. ಮುನಿರತ್ನ ಅವರು ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ನೀವು ಅದಕ್ಕೆ ಸಂಬಂಧಿಸಿದವರಿಂದ ಉತ್ತರ ಕೊಡಿಸಿ. ಆದರೆ ಆಡಳಿತ ಪಕ್ಷದ ಸದಸ್ಯರೇ ಈ ರೀತಿ ಧರಣಿ ಮಾಡುವುದು ಸರಿಯಲ್ಲ. ವಿಧಾನ ಮಂಡಲದ ಇತಿಹಾಸದಲ್ಲೇ ಈ ರೀತಿ ನಡೆದಿಲ್ಲ’ ಎಂದು ತಿಳಿಸಿದರು.
ಆದರೆ ಇದಕ್ಕೆ ಒಪ್ಪದ ಆಡಳಿತ ಪಕ್ಷದ ಸದಸ್ಯರು ಸಭಾಧ್ಯಕ್ಷರ ರೂಲಿಂಗ್ ಆಗಿ ಪಟ್ಟು ಹಿಡಿದು ಧರಣಿ ಮುಂದುವರೆಸಿದರು. ಈ ಹಂತದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಅಪ್ಪಾಜಿ ನಾಡಗೌಡ ಅವರು, ಸದನದಲ್ಲಿ ಸದಸ್ಯರಾದ ಮುನಿರತ್ನ ಅವರ ವರ್ತನೆ ಸರಿಯಲ್ಲ. ಸದಸ್ಯರ ಹಾಗೂ ಸದನದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಹೇಳಿದರು.
ನಂತರ ಯು.ಟಿ.ಖಾದರ್ ಅವರು, ಸದನದಲ್ಲಿ ಬಿಬಿಎಂಪಿ ಹೊರತುಪಡಿಸಿ ಉಳಿದಂತೆ ಸದಸ್ಯರುಗಳು ವೈಯುಕ್ತಿಕವಾಗಿ ಮಾತನಾಡಿರುವ ಮಾತುಗಳನ್ನು ಕಡತದಿಂದ ತೆಗೆದು ಹಾಕುವಂತೆ ಸೂಚಿಸಿ, ಸದನಕ್ಕೆ ತಮಗೇ ಆದ ಗೌರವ ಇದೆ. ಸದಸ್ಯರು ಗೌರವದಿಂದ ನಡೆದುಕೊಳ್ಳಬೇಕು. ನಾನು ಹೇಳಿದರೂ ಮುನಿರತ್ನ ಅವರು ಮಾತುಗಳನ್ನು ಮುಂದುವರೆಸಿದರು. ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸದನದಲ್ಲಿ ಯಾರೇ ಆಗಲೀ ಸವಾಲು ಹಾಕುವ ರೀತಿ ನಡೆದುಕೊಳ್ಳುವುದು ಒಳ್ಳೆಯ ವರ್ತನೆಯಲ್ಲ. ಇಲ್ಲಿ ಬಂದಿರುವ ಎಲ್ಲರಿಗೂ ತಾಕತ್ತು ಇದೆ. ಸದನದ ಗೌರವ, ಘನತೆ ಕಾಪಾಡಿ. ಮತ್ತೆ ಈ ರೀತಿ ನಡೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿ ಧರಣಿ ನಿರತ ಆಡಳಿತ ಪಕ್ಷದ ಸದಸ್ಯರಿಗೆ ತಮ್ಮ ಸ್ಥಾನಗಳಿಗೆ ತೆರಳುವಂತೆ ಸೂಚಿಸಿದರು. ಸ್ಪೀಕರ್ ಖಾದರ್ ರೂಲಿಂಗ್ ನಂತರ ಆಡಳಿತ ಪಕ್ಷದ ಸದಸ್ಯರು ಧರಣಿ ಹಿಂಪಡೆದರು.






