ಬಿಜೆಪಿ ನಾಯಕರದ್ದು ತೆರೆ ಮುಂದೆ ಒಂದು ನಾಟಕವಾದರೆ, ತೆರೆ ಹಿಂದೆ ಬೇರೆಯದ್ದೇ ಕಾಯಕ : ಕಾಂಗ್ರೆಸ್ ವಾಗ್ದಾಳಿ

PC : FB/Indian National Congress - Karnataka
ಬೆಂಗಳೂರು : ಬಿಜೆಪಿ ಆಡಳಿತ ಅವಧಿಯಲ್ಲಿ (ಏಪ್ರಿಲ್ 03, 2021) ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್ ಸಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಈಗ ಬಿಜೆಪಿಯವರೇ ಅವರ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್, ಬಿಜೆಪಿ ನಾಯಕರದ್ದು ತೆರೆ ಮುಂದೆ ಒಂದು ನಾಟಕವಾದರೆ, ತೆರೆ ಹಿಂದೆ ಬೇರೆಯದ್ದೇ ಕಾಯಕ ಎಂದು ವಾಗ್ದಾಳಿ ನಡೆಸಿದೆ.
ಕೆಪಿಎಸ್ ಸಿ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳ ಮುಂದೆ ಬೊಬ್ಬೆ ಹಾಕುವ ಬಿಜೆಪಿ ನಾಯಕರು, ತೆರೆ ಹಿಂದೆ ಭ್ರಷ್ಟಾಚಾರ ಆರೋಪ ಹೊತ್ತಿರುವ ಶಿವಶಂಕರಪ್ಪ ಸಾಹುಕಾರ್ ಅವರ ಪರ ಬಿಜೆಪಿ ಬೆಂಬಲಿತ ವಕೀಲರಾದ ಅರುಣ್ ಶ್ಯಾಮ್ ವಕಾಲತ್ತು ವಹಿಸುತ್ತಿದ್ದಾರೆ. ಈ ಅರುಣ್ ಶ್ಯಾಮ್ ಬಿಜೆಪಿ ಅವಧಿಯಲ್ಲಿ ಕರ್ನಾಟಕದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು. ದಿನಬೆಳಗಾದರೆ ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ಮಂದಿ ಇಂತಹ ವಿಚಾರದಲ್ಲಿ ಜಾಣ ಕುರುಡರಾಗುತ್ತಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.






