ಓಲೈಕೆ, ಮತಬ್ಯಾಂಕಿಗಾಗಿ ಸ್ಲಂ ನಿರ್ಮಾಣಕ್ಕೆ ಕಾಂಗ್ರೆಸ್ ಕಾರಣ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಕರ್ನಾಟಕದ ಗೃಹ ಇಲಾಖೆಯನ್ನು ನಡೆಸಲು ಆಗದಿದ್ದರೆ ರಾಜ್ಯದ ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯd ಜಗನ್ನಾಥ ಭವನದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ‘ಗೊತ್ತಿಲ್ಲ ಸಚಿವರೇ ರಾಜೀನಾಮೆ ಕೊಟ್ಟು ನಡೆಯಿರಿ ಪೋಸ್ಟರ್’ ಅನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಗೃಹ ಸಚಿವರೇ ಸಬೂಬುಗಳನ್ನು ಹೇಳಿಕೊಂಡು ಎಷ್ಟು ದಿನ ಈ ರಾಜ್ಯವನ್ನು ಹಾಳು ಮಾಡುತ್ತೀರಿ? ನೀವು ಅಧಿಕಾರ ಬಿಟ್ಟು ಕೊಡಿ. ಬೇರೆ ಯಾರಿಗಾದರೂ ತಾಕತ್ತಿದ್ದರೆ ಆಡಳಿತ ನಡೆಸಲಿ ಎಂದು ಒತ್ತಾಯಿಸಿದರು. ಡಾ. ಪರಮೇಶ್ವರ್ ಅವರೇ, ಇದು ನಿಮ್ಮ ಅಸಹಾಯಕತೆಯೇ? ಅಥವಾ ಬೇರೆಯವರು ನಿಮಗೆ ಕೆಟ್ಟ ಹೆಸರು ತರಲು ನಿಮ್ಮ ವಿರುದ್ಧವಾಗಿ ಮಾಡಿದ ಷಡ್ಯಂತ್ರವೇ ಎಂದು ಹೇಳಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಡ್ರಗ್ ಮಾಫಿಯ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಮಾಫಿಯಕ್ಕೆ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಅವಕಾಶ ಕಲ್ಪಿಸುವ ಮೂಲಕ ಕಾಂಗ್ರೆಸ್ ಸರಕಾರವೇ ಡ್ರಗ್ ಸರಕಾರವಾಗಿದೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಡ್ರಗ್ ಕಾರ್ಖಾನೆ ತಲೆ ಎತ್ತಿರುವುದು ಹೊರಕ್ಕೆ ಬರುತ್ತಿದೆ ಎಂದು ಅವರು ವಿವರಿಸಿದರು.
ಸರಕಾರವೇ ಡ್ರಗ್ ದಂಧೆ ಮಾಡಿಸುತ್ತಿದೆಯೇ :
ಸರಕಾರವೇ ಡ್ರಗ್ ದಂಧೆ ಮಾಡಿಸುತ್ತಿದೆಯೇ ಎಂದು ಅನುಮಾನ ಬರುತ್ತಿದೆ ಎಂದು ಆರೋಪಿಸಿದ ಅವರು, ಡ್ರಗ್ ಪೆಡ್ಲರ್ ಗಳನ್ನು ನಮ್ಮ ಸರಕಾರ ಹಿಡಿಯುವುದಿಲ್ಲ. ಮೈಸೂರು, ಬೆಂಗಳೂರಿನ 3 ಕಡೆ ಮಾದಕವಸ್ತು ಕಾರ್ಖಾನೆಗಳ ಮೇಲೆ ಮಹಾರಾಷ್ಟ್ರದ ಪೊಲೀಸರು ದಾಳಿ ಮಾಡಬೇಕಾಯಿತು ಎಂದು ಅವರು ತಿಳಿಸಿದರು.
ರಾಜ್ಯದ ಗೃಹ ಇಲಾಖೆ ಸತ್ತು ಹೋಗಿದೆಯೇ? ಬೇಹುಗಾರಿಕಾ ದಳ, ನಮ್ಮ ಪೊಲೀಸರು ಏನು ಮಾಡುತ್ತಿದ್ದಾರೆ ?. ಮಹಾರಾಷ್ಟ್ರ ಪೊಲೀಸರು ಇದನ್ನು ಪತ್ತೆ ಹಚ್ಚಿದ ಬಳಿಕ ಇಲ್ಲಿನ ಕಾಂಗ್ರೆಸ್ ಸರಕಾರ ನಾವು ಹಿಡಿದಿದ್ದೇವೆ ಎಂದು ತಿಳಿಸಿ, ಘನ ಕಾರ್ಯ ಮಾಡಿದಂತೆ ವರ್ತಿಸುತ್ತದೆ ಎಂದು ಆರೋಪಿಸಿದರು.
ಮಾದಕವಸ್ತು ಮಾರಾಟ ಅಡ್ಡೆಗಳಿಗೆ ಸರಕಾರದ ಕುಮ್ಮಕ್ಕು :
ಮಾದಕವಸ್ತು ಮಾರಾಟ ಅಡ್ಡೆಗಳಿಗೆ ಸರಕಾರದ ಕುಮ್ಮಕ್ಕಿದೆ. ಗಂಧದ ನಾಡು ಗಾಂಜಾ ಬೀಡಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕೇ ಬೇಡವೇ ಎಂಬ ಪರಿಸ್ಥಿತಿ ಬಂದಿದೆ. ಆ್ಯಂಟಿ ನಕ್ಸಲ್ ದಳದ ಕೆಲಸ ಮುಗಿದುಹೋಗಿದೆ. ಅದನ್ನು ಆ್ಯಂಟಿ ಡ್ರಗ್ಸ್ ದಳವಾಗಿ ಮಾಡಿ ಮಾದಕವಸ್ತು ಜಾಲದ ಸಂಪೂರ್ಣ ಮೂಲೋತ್ಪಾಟನೆ ಮಾಡಿ ಎಂದು ಒತ್ತಾಯಿಸಿದರು.
ಒಟ್ಟಾರೆ ಕಾಂಗ್ರೆಸ್ ಸರಕಾರವು ಈ ರಾಜ್ಯವನ್ನು ಸಂಪೂರ್ಣ ಹದಗೆಡಿಸಿದೆ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿಗಳು ತಕ್ಷಣ ಕಾರ್ಯೋನ್ಮುಖವಾಗಬೇಕು. ಮುಖ್ಯಮಂತ್ರಿಗಳು ಅಥವಾ ಗೃಹ ಸಚಿವರು ರಾಜೀನಾಮೆ ಕೊಡಬೇಕೇ ಎಂದು ಅವರೇ ತೀರ್ಮಾನಿಸಲಿ ಎಂದು ತಿಳಿಸಿದರು.
ರಾಜ್ಯದ ಜನರು ತಲೆ ಬಗ್ಗಿಸುವಂತೆ ಮಾಡದಿರಿ :
ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ಬೇರೆಯವರ ಜಾಗದಲ್ಲಿ ಗುಡಿಸಲು ಹಾಕಿದವರನ್ನು ಬುಲ್ಡೋಜರ್ ತೆರವುಗೊಳಿಸುವ ಕಾರ್ಯವನ್ನು ಸರಕಾರ ಮಾಡಿದೆ. ಈಗ ಕೇರಳದ ಮುಖ್ಯಮಂತ್ರಿಗಳು ಬುಲ್ಡೋಜರ್ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದಾರೆ. ಈಗ ಕೃಷ್ಣಬೈರೇಗೌಡರು, ಅನುಮತಿ ನೀಡಿದ್ದ ಮುಖ್ಯಮಂತ್ರಿಗಳು ಮಾತನಾಡುತ್ತಿಲ್ಲ. ಕೇರಳದವರಿಗೆ ಇಲ್ಲೇನು ಕೆಲಸ? ಕೇರಳದ ಜನರು ಪ್ರಜ್ಞಾವಂತರು. ಇಲ್ಲಿ ನಡೆಯುವ ರಾಜಕೀಯ ಏನು? ಎಂದು ಕೇಳಿದರು. ಇಲ್ಲಿನ ಸರಕಾರ ಅತ್ಯಂತ ದುರ್ಬಲವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ನೀವು ವೇಣುಗೋಪಾಲ್ ಅಥವಾ ಪಿಣರಾಯಿ ವಿಜಯನ್ ಸರ್ಕಾರದ ಗುಲಾಮರಾದರೂ ಆಗಿರಿ, ಆದರೆ ನನ್ನ ರಾಜ್ಯದ ಜನರನ್ನು ಇನ್ನೊಬ್ಬರ ಮುಂದೆ ತಲೆ ಬಗ್ಗಿಸುವಂತೆ ಮಾಡಬೇಡಿ ಎಂದು ಎಚ್ಚರಿಸಿದರು.
ಬಾಂಗ್ಲಾದೇಶದವರಿಗೆ ಮನೆ ನೀಡುವುದಾದರೆ, ಇಲ್ಲಿ ಮನೆ ಕಳೆದುಕೊಂಡವರ ಸ್ಥಿತಿ ಏನು ಎಂದು ಪ್ರಶ್ನಿಸಿದರು. ಇವರಲ್ಲಿ ಬಹುತೇಕರು ರೋಹಿಂಗ್ಯಾಗಳೇ ಎಂಬ ಮಾಹಿತಿ ಇದೆ. ಈ ಪ್ರಕರಣವನ್ನು ಎನ್ಐಎಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಹೆಬ್ಬಾಳ ಬ್ರಿಡ್ಜ್ ಪಕ್ಕದಲ್ಲಿ ಸುಮಾರು 200 ಗುಡಿಸಲುಗಳಿದ್ದು, ಅಲ್ಲಿ ಗಾಂಜಾ ಹಾಗೂ ಡ್ರಗ್ ದಂಧೆ ನಡೆಯುತ್ತಿದೆ. ಇದನ್ನು ತಿಳಿಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮತಬ್ಯಾಂಕ್ ರಾಜಕಾರಣಕ್ಕಾಗಿ ಸ್ಲಂ ನಿರ್ಮಾಣಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ಬಿಜೆಪಿ ಮುಖಂಡ ಆರ್.ರುದ್ರಯ್ಯ ಅವರು ಉಪಸ್ಥಿತರಿದ್ದರು.







