ದೇಶ ಕಟ್ಟಿದ ಕಾಂಗ್ರೆಸ್ಗೆ ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ: ಕಾಂಗ್ರೆಸ್
ಬೆಂಗಳೂರು: ಭಾರತ ರೂಪುಗೊಳ್ಳುವಾಗ ಹುಟ್ಟಿಯೇ ಇಲ್ಲದ ಬಿಜೆಪಿಯಿಂದ ದೇಶ ಕಟ್ಟಿದ ಕಾಂಗ್ರೆಸ್ ಪಕ್ಷವು ದೇಶದ ಬಗ್ಗೆ ಪಾಠ ಕೇಳುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ಸಂಸ್ಥಾನಗಳನ್ನು ವಿಲೀನಗೊಳಿಸಿ, ರಾಜ್ಯಗಳನ್ನು ಸೇರಿಸಿ ಭಾರತ ಎಂಬ ಒಕ್ಕೂಟವನ್ನು ನಿರ್ಮಿಸಿದ್ದು ಕಾಂಗ್ರೆಸ್. ಪ್ರತ್ಯೇಕತೆಯನ್ನು ಕಾಪಾಡಿಕೊಂಡಿದ್ದ ಸಿಕ್ಕಿಂ ರಾಜ್ಯವನ್ನು ಭಾರತದೊಳಗೆ ಸೇರಿಸಿದ್ದು ಕಾಂಗ್ರೆಸ್ ಎಂದು ಹೇಳಿದೆ.
ದೇಶಕ್ಕೆ ರಾಷ್ಟ್ರ ಧ್ವಜ ಕೊಟ್ಟಿದ್ದು ಕಾಂಗ್ರೆಸ್, ಸಂವಿಧಾನವನ್ನು ಭಾರತಕ್ಕೆ ವಿಧಿಸಿಕೊಂಡಿದ್ದು ಕಾಂಗ್ರೆಸ್. ಭಾಷೆ, ಸಂಸ್ಕೃತಿಗಳ ವೈವಿಧ್ಯತೆಯನ್ನು ಹೊಂದಿರುವ ರಾಜ್ಯಗಳ ಐಕ್ಯತೆಯನ್ನು ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್ ಎಂದು ಹೇಳಿದೆ.
ಕಳೆದ ಹತ್ತು ವರ್ಷದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದ್ದರೂ ಕರ್ನಾಟಕದ ಯಾವೊಬ್ಬ ಬಿಜೆಪಿ ಸಂಸದರೂ ಬಾಯಿ ಬಿಡದೆ ಗುಲಾಮಗಿರಿ ಮಾಡಿಕೊಂಡಿರುವಾಗ ಕಾಂಗ್ರೆಸ್ ಪಕ್ಷದ ಏಕೈಕ ಸಂಸದರು ದನಿ ಎತ್ತಿದ್ದಾರೆ, ಬಿಜೆಪಿಗೆ ನಿಜಕ್ಕೂ ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಮೋದಿ ಎದುರು ಧೈರ್ಯದಿಂದ ನಿಂತು ನ್ಯಾಯ ಕೇಳಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.