ಅಡ್ಡಮತದಾನ ಆಂತರಿಕ ತನಿಖೆ ವರದಿ ರಾಜ್ಯಾಧ್ಯಕ್ಷರಿಗೆ ಸಲ್ಲಿಕೆ: ಸಿ.ಟಿ. ರವಿ

ಸಿ.ಟಿ.ರವಿ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನವರು ಅನೈತಿಕ ಮಾರ್ಗದಿಂದ ಅಡ್ಡ ಮತದಾನ ಮಾಡಿಸಿದ್ದಾರೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತು ಆಂತರಿಕ ತನಿಖಾ ವರದಿಯನ್ನು ಇಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಿಗೆ ಸಲ್ಲಿಸಿದ ನಂತರ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡುತ್ತಿದ್ದರು.
ಅಡ್ಡಮತದಾನ ಆಗಿರುವುದು ಕಾಂಗ್ರೆಸ್ ಮೇಲಿನ ಅಭಿಮಾನಕ್ಕೆ ಅಂತ ಕಾಂಗ್ರೆಸ್ ನಾಯಕರು ಭಾವಿಸಬಾರದು. ಬೇರೆ ರಾಜ್ಯಗಳಲಿ ಅಡ್ಡಮತದಾನ ಆದಾಗ ಕಾಂಗ್ರೆಸ್ನವರು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ ಅಂತ ಉಪದೇಶ ಮಾಡ್ತಾರೆ. ಆದರೆ ಈಗ ಅಡ್ಡಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಅಪಮೌಲ್ಯಗೊಳಿಸಿದ್ದಾರೆ. ಆದ್ದರಿಂದ ಇನ್ನು ಮುಂದೆ ಅವರಿಗೆ ಅಡ್ಡ ಮತದಾನ ಆದರೆ ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ ಎಂದರು.
ಚುನಾವಣೆಯಲ್ಲಿ ಯಾವ ಎಚ್ಚರಿಕೆ ವಹಿಸಬೇಕಿತ್ತು ಯಾವ ಎಚ್ಚರಿಕೆ ವಹಿಸಿಲ್ಲ ಎಂಬುದು ವರದಿಯಲ್ಲಿ ಇದೆ. ಇದು ಆಂತರಿಕ ತನಿಖೆ ಆಗಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ಹೇಳಿದರು.
ಅಡ್ಡಮತದಾನದ ಕುರಿತು ಆಂತರಿಕ ತನಿಖೆ ಮಾಡಲು ನನ್ನೊಂದಿಗೆ ಮಾಜಿ ಸಚಿವ ಎನ್. ಮಹೇಶ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಹಾಗೂ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದ ಮೂರು ಜನರ ಸಮಿತಿ ಮಾಡಿದ್ದರು. ಆದಷ್ಟು ಬೇಗ ಆಂತರಿಕವಾಗಿ ತನಿಖೆ ನಡೆ ವರದಿ ನೀಡಿ ಎಂದು ರಾಜ್ಯಾಧ್ಯಕ್ಷರು ನಿರ್ದೇಶನ ನೀಡಿದ್ದರು. ಮೂವರು ಚರ್ಚೆ ಮಾಡಿ ಮೂವರಿಗೆ ಸಮ್ಮತವಾದ ಅಂಶಗಳನ್ನು ಮಾತ್ರ ವರದಿಯಲ್ಲಿ ಉಲ್ಲೇಖ ಮಾಡಿ ವರದಿ ಸಿದ್ಧಪಡಿಸಿದ್ದೇವೆ. ಅಡ್ಡಮತದಾನ ಮಾಡಿದವರ ಬಗ್ಗೆ ಮಾಧ್ಯಮ ಮತ್ತು ಸಾರ್ವಜನಿಕ ವಲಯದಲ್ಲಿ ಅನುಮಾನ ಕಂಡು ಬಂದವರ ಪಟ್ಟಿ ಮಾಡಿ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿ ಸಭಿಪ್ರಾಯ ಸಂಗ್ರಹಿಸಿದ್ದೇವೆ. ಜೆಡಿಎಸ್ ಮುಖಂಡರು, ವಿರೋಧ ಪಕ್ಷದ ಮುಖಂಡರು, ಮುಖ್ಯ ಸಚೇತಕರು, ಮಾಧ್ಯಮದವರೊಂದಿಗೆ ಸಮಾಲೋಚನೆ ಮಾಡಿದ್ದೇವೆ. ಸ್ಥಳೀಯ ಮಾಹಿತಿ ಸಂಗ್ರಹಿಸಿದ್ದೇವೆ, ಸಾಂದರ್ಭಿಕವಾಗಿ ಮಾಹಿತಿ ಪಡೆದಿದ್ದೇವೆ ಎಂದರು.






