ಕೆಪಿಎಸ್ಸಿ ರದ್ದುಗೊಳಿಸಲು ಡಿ.ವಿ.ಸದಾನಂದಗೌಡ ಆಗ್ರಹ

ಬೆಂಗಳೂರು : ಕೆಪಿಎಸ್ಸಿ ಕಚೇರಿಯಲ್ಲಿ ನಡೆಯುತ್ತಿರುವ ಹಗರಣ, ಅವ್ಯವಸ್ಥೆಗಳು ಕೇವಲ ರಾಜಕೀಯ ನೆಲೆಯಿಂದ ನೇಮಕವಾಗುತ್ತಿರುವ ಅಧಿಕಾರಿಗಳು ಈ ವಿಫಲತೆಗೆ ಜವಾಬ್ದಾರಿಗಳಾಗಿದ್ದಾರೆ. ಇದನ್ನು ಸುಧಾರಿಸಲು ಕೆಪಿಎಸ್ಸಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಪಾರದರ್ಶಕ, ಹೊಸ ಮತ್ತು ಜವಾಬ್ದಾರಿಯುತ ಆಯೋಗವನ್ನು ರಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ ನೇಮಕಾತಿ ಪರೀಕ್ಷೆಗಳಲ್ಲಿನ ನಿರಂತರ ಅಶುದ್ಧತೆಗಳು ಸಾವಿರಾರು ಪ್ರತಿಭಾನ್ವಿತ ಯುವಜನರ ಭವಿಷ್ಯವನ್ನು ಅಂಧಕಾರಕ್ಕಿಳಿಸುತ್ತಿವೆ ಎಂದು ದೂರಿದ್ದಾರೆ.
ಕೆಪಿಎಸ್ಸಿ ನಡೆಸಿದ ಇತ್ತೀಚಿನ ಪರೀಕ್ಷೆಗಳಲ್ಲಿ ಕನ್ನಡ ಅನುವಾದ ದೋಷಗಳು ಮಾತ್ರವಲ್ಲ, ಈ ಹಿಂದಿನ ಅನೇಕ ಪರೀಕ್ಷೆಗಳಲ್ಲೂ ನಡೆದ ಅಕ್ರಮಗಳು, ಅಶಿಸ್ತಿನ ಕೆಲಸ ಹಾಗೂ ಆಯೋಗದ ನಿರ್ಲಕ್ಷ್ಯ ದೃಢವಾಗಿರುವುದು ಆಕ್ಷೇಪಾರ್ಹ. ನಾನು ಇತ್ತೀಚೆಗೆ ಕೆಲ ವಿದ್ಯಾರ್ಥಿಗಳ ಮಾತುಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯೋಗ್ಯತೆ ಹಾಗೂ ಶ್ರಮದ ಮೇಲೆ ನಮ್ಮ ಭವಿಷ್ಯ ನಿರ್ಮಿಸಿಕೊಳ್ಳಲು ಹೊರಟಿದ್ದೇವೆ. ಆದರೆ ಸರಕಾರ ಮತ್ತು ಆಯೋಗದ ನಿರ್ಲಕ್ಷದಿಂದ ನಮ್ಮ ಕನಸುಗಳು ಕಿತ್ತುಕೊಳ್ಳಲಾಗುತ್ತಿದೆ ಎಂಬ ಅವರ ನೋವಿನ ಮಾತು ಬಹಳ ಖೇದಖರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಆಕ್ರೋಶ ಮತ್ತು ನಿರಾಸೆ ಪರಿಗಣನೆಗೆ ಒಳಗಾಗಲೇಬೇಕು. ಇದು ಕೆಲವೊಬ್ಬರ ವೈಯಕ್ತಿಕ ಸಮಸ್ಯೆಯಾಗಿರುವುದಿಲ್ಲ. ಇದು ಕರ್ನಾಟಕದ ಇಡೀ ಯುವಜನತೆಗೆ ಹೊಡೆತವಾಗಿದೆ. ಈ ಎಲ್ಲಾ ಗೊಂದಲಕ್ಕೆ ಸರಕಾರವೇ ಹೊಣೆ. ಕೆಪಿಎಸ್ಸಿಯನ್ನು ಸರಿಪಡಿಸುತ್ತೇವೆ. ದೋಷಗಳನ್ನು ತಿದ್ದುತ್ತೇವೆ ಎಂದು ನೀಡಿದ ಭರವಸೆಗಳು ಕೇವಲ ಮಾತಾಗಿವೆ. ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸಿದ ಕಾರಣಕ್ಕೆ ಆಯೋಗವನ್ನು ಹೊಗಳಲು ಸಾಧ್ಯವಿಲ್ಲ ಕೆಪಿಎಸ್ಸಿಯ ನಿರಂತರ ಅವ್ಯವಸ್ಥೆ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ನೋಡಿದರೆ, ಈ ಆಯೋಗವನ್ನು ಇನ್ನಷ್ಟು ಮುಂದುವರಿಸಲು ಯಾವುದೇ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.
ನಾನು ಕರ್ನಾಟಕ ಸರಕಾರವನ್ನು ಹಾಗೂ ಕೆಪಿಎಸ್ಸಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಪರೀಕ್ಷೆಗಳ ಪೂರಕವಾಗಿ ಸರಕಾರ ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಹಕ್ಕುಗಳನ್ನು ಒದಗಿಸಬೇಕು. ಒಮ್ಮೆ ಮಾತ್ರವಲ್ಲ, ಎರಡು ಬಾರಿ ಅಲ್ಲ, ಏನೋ ಬಾರಿ ಈ ಆಯೋಗ ತಪ್ಪು ಮಾಡಿದೆ. ಪ್ರತ್ಯೇಕ ನ್ಯಾಯಾಂಗ ತನಿಖೆ ನಡೆಸಿ, ವೈಫಲ್ಯಕ್ಕೆ ಹೊಣೆಗಾರರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪ್ರತಿಭಾನ್ವಿತ ಯುವಕರು ಸರಕಾರದ ಅವ್ಯವಸ್ಥೆಗೆ ಬಲಿಯಾಗಬಾರದು ಎಂದು ಆಗ್ರಹಿಸಿದ್ದಾರೆ.







