ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು: ದಿನೇಶ್ ಗುಂಡೂರಾವ್

ಬೆಂಗಳೂರು : ನರ್ಸ್ ವೃತ್ತಿ ಅತ್ಯಂತ ಸಂಕೀರ್ಣವಾಗಿದ್ದು, ಆರೋಗ್ಯ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ನರ್ಸ್ಗಳ ಪಾತ್ರ ಬಹಳ ಮುಖ್ಯವಾಗಿದೆ. ಹೀಗಾಗಿ ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಇಲ್ಲಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಶುಶ್ರೂಷಕ ಶಿಕ್ಷಕ ಸಂಘದ ಸಹಯೋಗದೊಂದಿಗೆ ನಡೆದ ದಾದಿಯರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಎಷ್ಟೋ ಬಾರಿ ನರ್ಸ್ಗಳ ವರ್ತನೆಯೇ ರೋಗಿಗಳಿಗೆ ಧೈರ್ಯ ತುಂಬುತ್ತದೆ. ನರ್ಸ್ ಆಗಿ ಕೆಲಸ ಮಾಡುವಾಗ ನಾಯಕತ್ವ ಗುಣ, ಮಾತೃ ಹೃದಯ, ವಿಶ್ಲೇಷಣೆ, ಅನುಕಂಪ, ಸಮಯೋಚಿತ ನಿರ್ಧಾರ ಬಹಳ ಮುಖ್ಯ. ಮಾನಸಿಕ ದೃಢತೆಯೂ ಬಹಳ ಮುಖ್ಯವಾಗುತ್ತದೆ. ಹೀಗಾಗಿ ನರ್ಸ್ಗಳಿಗೆ ತರಬೇತಿ ನೀಡುವುದು ಅಗತ್ಯ ಎಂದರು.
ನರ್ಸ್ ತರಬೇತಿಯಲ್ಲಿ ಕರ್ನಾಟಕವು ಬಹಳ ಮುಂಚೂಣಿಯಲ್ಲಿದೆ. ಆದರೆ ನರ್ಸ್ ವೃತ್ತಿಯಲ್ಲಿರುವವರಿಗೆ ಸಾಕಷ್ಟು ಸವಾಲುಗಳು ಇದೆ. ಕಡಿಮೆ ಸಂಬಳ, ಅನಿಯಮಿತ ಕೆಲಸದ ಅವಧಿ ಮುಂತಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದನ್ನು ಸರಿಪಡಿಸುವ ಹೊಣೆಗಾರಿಕೆ ನಮ್ಮ ಮೇಲೆ ಎಂಬುದು ಗಮನದಲ್ಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾದ್ಯಕ್ಷ ಯು.ಟಿ. ಖಾದರ್, ಶಾಸಕ ಡಾ. ರಂಗನಾಥ್, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಹಾಗೂ ಕರ್ನಾಟಕ ಶುಶ್ರುಷಕಿಯರ ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.






