ಆರ್ಥಿಕ ದುರ್ಬಲ ವರ್ಗಗಳಿಗೆ ಶಿಕ್ಷಣ-ಸರಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ.10ರಷ್ಟು ಮೀಸಲಾತಿ ಜಾರಿ ಕಷ್ಟಕರ : ದಿನೇಶ್ ಗುಂಡೂರಾವ್

ಬೆಂಗಳೂರು : ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ(ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಸರಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ.10ರಷ್ಟು ಮೀಸಲಾತಿ ಕರ್ನಾಟಕದಲ್ಲಿ ಜಾರಿಗೊಳಿಸುವುದು ಕಷ್ಟಕರವಾಗಿದ್ದು, ಮೊದಲು ಇದರಲ್ಲಿನ ಅಂಶಗಳು, ಗೊಂದಲಗಳ ಕುರಿತು ಗಂಭೀರ ಚರ್ಚೆ ನಡೆಸಬೇಕಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಬ್ರಾಹ್ಮಣ ಮಹಾಸಮ್ಮೇಳನದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಇಡಬ್ಲ್ಯೂಎಸ್ ಜಾರಿಗೆ ತಂದರೂ ಅನೇಕ ರಾಜ್ಯಗಳಲ್ಲಿ ಇದನ್ನು ಪರಿಗಣಿಸಿಲ್ಲ. ಜಾರಿಗೂ ಮುಂದಾಗಿಲ್ಲ. ಆದರೆ, ಕರ್ನಾಟಕದಲ್ಲಿ ಜಾರಿ ಸಂಬಂಧ ಮೊದಲು ಚರ್ಚೆ ನಡೆಸಬೇಕಾಗಿದೆ ಎಂದು ನುಡಿದರು.
ಈಗಾಗಲೇ ಜಾತಿಗಣತಿ ವರದಿ ವಿವಾದ ಸ್ವರೂಪ ಪಡೆದುಕೊಂಡಿದ್ದು, ಇದರ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿಬರುತ್ತಿದೆ. ಇದೀಗ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ(ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಸರಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ.10ರಷ್ಟು ಮೀಸಲಾತಿ ಜಾರಿ ಸಂಬಂಧವೂ ಅನೇಕ ವಿಚಾರಗಳು ಇವೆ. ಇದನ್ನು ಮೊದಲು ಚರ್ಚೆ ನಡೆಸಬೇಕು. ಆನಂತರ ಸಂಘಟನೆ, ಅಭಿಪ್ರಾಯಗಳ ಮೂಲಕ ಸರಕಾರಕ್ಕೆ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಕೆಲವರು ರಾಜ್ಯ ಕಾಂಗ್ರೆಸ್ ಸರಕಾರ ಇಡಬ್ಲ್ಯೂಎಸ್ ಜಾರಿಗೊಳಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಈ ಹಿಂದೆ ಬಿಜೆಪಿ ಸರಕಾರ ಆಡಳಿತದಲ್ಲಿ ಇದ್ದ ಸಂದರ್ಭದಲ್ಲಿ ಜಾರಿಗೆ ತರಲಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ಜಾತಿ ಆಧಾರಿತ ಸಂಘಟನೆ ಈಗಿನ ಕಾಲಘಟ್ಟಕ್ಕೆ ಅಗತ್ಯವಾಗಿದೆ. ತಮ್ಮ ಅಭಿವೃದ್ಧಿ, ಸಹಾಯಕ್ಕಾಗಿ ಪ್ರತಿಯೊಬ್ಬರು ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು.ಜತೆಗೆ, ಸರಕಾರದ ಯೋಜನೆಗಳ ಫಲಾನುಭವಿಗಳಾಗಿ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹಿಂದೂ ಧರ್ಮ ಅಪಾಯದಲ್ಲಿ ಇದೆ ಎಂದು ಕೆಲವರು ಹೇಳುತ್ತಾರೆ. ಆದರೆ, ವಾಸ್ತವವಾಗಿ ಇದು ಸುಳ್ಳಾಗಿದ್ದು, ಯಾರೋ ಸಹ ಸನಾತನ ಧರ್ಮವನ್ನು ಅಲ್ಲಡಿಸಲು ಸಾಧ್ಯವಿಲ್ಲ. ಈ ಧರ್ಮಕ್ಕೆ ಯಾರ ರಕ್ಷಣೆಯೂ ಬೇಕಾಗಿಲ್ಲ. ಆದರೆ, ಸಾಮಾಜಿಕ ವ್ಯವಸ್ಥೆಯಲ್ಲಿ ಪೈಪೂಟಿ ಇದ್ದೇ ಇರುತ್ತದೆ. ಇಂತಹ ಪ್ರಕ್ರಿಯೆ ಸಾವಿರಾರು ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಮೊದಲು ನಾವು ಬ್ರಾಹ್ಮಣ ಸಮುದಾಯಕ್ಕೆ ಏನು ಕೊಡುಗೆ ನೀಡಬಹುದೆಂದು ಯೋಚಿಸೋಣ ಎಂದು ಸಚಿವರು ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ರಾಜ್ಯ ಸರಕಾರ ನಡೆಸಿರುವ ಜಾತಿಗಣತಿಯಲ್ಲಿ ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಕೇವಲ 14 ಲಕ್ಷ ಮಾತ್ರ ಇದೆ ಎಂದು ಗೊತ್ತಾಗಿದೆ. ಆದರೆ, ಇದನ್ನು ನಂಬಲು ಅಸಾಧ್ಯವಾಗಿದ್ದು, ಕನಿಷ್ಠ ಎಂದರೂ 40 ಲಕ್ಷ ಇರಬಹುದು. ಇನ್ನೂ, ಜಾತಿಗಣತಿ ಪ್ರಕ್ರಿಯೆಗೆ ಯಾರು ತಮ್ಮ ಮನೆಗಳಿಗೆ ಬಂದು ಸಂಪರ್ಕಿಸಿಲ್ಲ ಎನ್ನುವ ಮಾತನ್ನು ಹಲವು ಬ್ರಾಹ್ಮಣ ಕುಟುಂಬಗಳು ದೃಢಪಡಿಸಿವೆ.ಹಾಗಾಗಿ, ರಾಜ್ಯ ಸರಕಾರ ಇಂತಹ ಗಂಭೀರ ವಿಷಯವನ್ನು ಚರ್ಚೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಸಂಸ್ಕೃತಿ ಒಮ್ಮೆ ನಾಶವಾದರೆ ಮತ್ತೆ ಕಟ್ಟಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನಿಮ್ಮ ಮಕ್ಕಳಿಗೆ ಲೌಖಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು.
ಸಮ್ಮೇಳನದಲ್ಲಿ ಸಚಿವ ಬೈರತಿ ಸುರೇಶ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಸಂಸದರಾದ ವಿಶ್ವೇಶ್ವರ ಕಾಗೇರಿ, ಡಾ.ಮಂಜುನಾಥ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







