ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಎಲ್ಲಾ ಅಣೆಕಟ್ಟುಗಳಿಗೆ ಭದ್ರತೆ : ಡಿ.ಕೆ. ಶಿವಕುಮಾರ್

ಬೆಂಗಳೂರು : ದೇಶದ ಭದ್ರತೆ ವಿಚಾರದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಎಲ್ಲ ಅಣೆಕಟ್ಟುಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಿಬ್ಬಂದಿಗಳ ಹೊರತಾಗಿ ಯಾವುದೇ ಪ್ರವಾಸಿಗರಿಗೆ ಅಣೆಕಟ್ಟಿನ ಬಳಿ ಅವಕಾಶ ನೀಡಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಇದು ದೇಶದ ವಿಚಾರವಾಗಿದ್ದು, ಈ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಸರಕಾರ ಕ್ರಮ ಕೈಗೊಂಡಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.
ನಗರದ ಭದ್ರತೆ ವಿಚಾರವಾಗಿ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟ ಸಂದೇಶವನ್ನು ರವಾನಿಸುತ್ತೇವೆ. ದೇಶದ ಐಕ್ಯತೆ ಗಮನದಲ್ಲಿಟ್ಟುಕೊಂಡು ಯೋಧರಿಗೆ ಆತ್ಮಸ್ಥೈರ್ಯ ತುಂಬಲು ಮುಂದಾಗಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಇತರೆ ವಿಚಾರ ಚರ್ಚೆ ಮಾಡಿ ನಂತರ ಮಾಹಿತಿ ನೀಡುತ್ತೇವೆ ಎಂದು ಅವರು ತಿಳಿಸಿದರು.
ನೆಲಮಂಗಲದ ಯೋಜನೆ ವಿಚಾರವಾಗಿ ವಿರೋಧ ಮಾಡುತ್ತಿರುವವರು ರೈತರಲ್ಲ, ಅವರು ರೈತ ವಿರೋಧಿಗಳು. ವಿರೋಧ ಮಾಡುವವರಿಗೆ ತಲೆಕೆಡಿಸಿಕೊಳ್ಳಲು ಆಗುವುದಿಲ್ಲ. ಕೋಲಾರಕ್ಕೆ ಹೋಗಿ ನೋಡಲಿ ಯೋಜನೆಯ ಉಪಯೋಗ ತಿಳಿಯುತ್ತದೆ. ಕೆರೆಗಳಿಗೆ ತುಂಬಿಸಿದ ನೀರು ಭೂಮಿಯ ಮೂಲಕ ಇಂಗುವಾಗ ಮತ್ತಷ್ಟು ಶುದ್ಧೀಕರಣವಾಗುತ್ತದೆ. ಆ ಮೂಲಕ ಅಂತರ್ಜಲ ಏರಿಕೆಯಾಗುತ್ತದೆ. ವೃಷಭಾವತಿ ನೀರು ಅರ್ಕಾವತಿ ಮೂಲಕ ನಮಗೆ ನೀರು ಬರುತ್ತಿಲ್ಲವೇ? ಕನಕಪುರ ಟೌನ್ನಲ್ಲಿ ಹರಿಯುವ ನೀರು ಇದೇ ಆಗಿದೆ. ನಾವು ಅದನ್ನು ಕುಡಿದು ಗಟ್ಟಿಯಾಗಿಲ್ಲವೇ ಎಂದು ಪ್ರಶ್ನಿಸಿದರು.