‘ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿಗೆ ಸಂಕಲ್ಪ’ | ಮಾಫಿಯಾಗೆ ಬಗ್ಗದೆ 33 ಪ್ಯಾಕೇಜ್ ಮೂಲಕ ಕಸ ವಿಲೇವಾರಿ: ಡಿ.ಕೆ.ಶಿವಕುಮಾರ್

ಬೆಂಗಳೂರು : ಕಸದ ಮಾಫಿಯಾದವರು ನನ್ನ ಮೇಲೆ ಏನೇನು ಗೂಬೆ ಕೂರಿಸಬೇಕೊ ಅದೆಲ್ಲವನ್ನು ಮಾಡಿದರು. ನಾನು ಯಾವುದಕ್ಕೂ ಬಗ್ಗದೆ, ಹೆದರದೆ 33 ಪ್ಯಾಕೇಜ್ ಮೂಲಕ ಕಸ ವಿಲೇವಾರಿಗೆ ತೀರ್ಮಾನಿಸಿದ್ದೇನೆ. ಕಸದಿಂದ ರಸ ತೆಗೆಯಬೇಕು ಎಂದು ಹೊರಟಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ನಗರದ ಮಾಗಡಿ ಮುಖ್ಯ ರಸ್ತೆಯಲ್ಲಿರುವ ಕನ್ನಹಳ್ಳಿಯಲ್ಲಿ ಸಮಗ್ರ ಘನ ತ್ಯಾಜ್ಯ ವಿಂಗಡಣಾ ಘಟಕದ 1ನೆ ಹಂತಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಈ 33 ಪ್ಯಾಕೇಜ್ ಗೆ ನ್ಯಾಯಾಲಯ ಸಮ್ಮತಿ ನೀಡಿದೆ. ಸ್ವಲ್ಪ ದಿನಗಳಲ್ಲೇ ಇವು ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.
ಕಸದ ಮಾಫಿಯಾ ಎನ್ನುವ ಪದವನ್ನು ನಾನು ಪದೆ ಪದೆ ಏಕೆ ಬಳಸುತ್ತಿದ್ದೇನೆ ಎಂದರೆ, ಇವರು ಪ್ರತಿ ಹಂತದಲ್ಲಿ ನ್ಯಾಯಾಲಯಗಳಿಗೆ ತೆರಳಿ ತಡೆಯಾಜ್ಞೆ ತಂದು ಸರಕಾರಕ್ಕೆ ಬ್ಲಾಕ್ ಮೇಲ್ ಮಾಡುತ್ತಿದ್ದರು. ಇವರು ಹೇಳಿದಂತೆ ಸರಕಾರ ಕೇಳಬೇಕು ಎನ್ನುವ ಧೋರಣೆ ಹೊಂದಿದ್ದರು. ಇದಕ್ಕೆಲ್ಲ ಕಡಿವಾಣ ಹಾಕಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಕಸದ ಸಮಸ್ಯೆ ಮುಕ್ತಿಗೆ ಸಂಕಲ್ಪ: ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ಹಾಡಲೇ ಬೇಕು ಎಂದು ನಾನು ಸಂಕಲ್ಪ ಮಾಡಿದ್ದೇನೆ. ಸ್ವಯಂಸೇವಾ ಸಂಸ್ಥೆ ಹಸಿರು ದಳದವರು ಸೇರಿ ಅತ್ಯಂತ ಕ್ಲಿಷ್ಟಕರ ಕೆಲಸ ಮಾಡುತ್ತಿದ್ದಾರೆ. ನಗರದ ಅನೇಕ ಕಡೆ ಜನರು ಎಲ್ಲೆಂದರಲ್ಲಿ ಕಸ ಎಸೆಯುವುದು, ಕಟ್ಟಡ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಕಸ ಸುರಿಯುವ ವಾಹನಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ಅವರು ಹೇಳಿದರು.
ಕಸದಿಂದ ಅನಿಲ(ಗ್ಯಾಸ್) ತಯಾರಿಕೆಗೆ ನಾಲ್ಕು ಸಂಸ್ಥೆಗಳನ್ನು ಮಾಡಬೇಕು ಎಂದು ಹೊರಟಿದ್ದೆ. ಜಾಗದ ಸಮಸ್ಯೆಯಿಂದ ಈಗ ಎರಡು ಸ್ಥಳಗಳಲ್ಲಿ ಅವಕಾಶ ನೀಡಿ ಟೆಂಡರ್ ನೀಡಲಾಗಿದೆ. ಈ ಹಿಂದೆ 10-12ಕ್ಕೂ ಹೆಚ್ಚು ಸಂಸ್ಥೆಗಳು ಕಸದಿಂದ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎಂದು ಬಂದು ವಿಫಲರಾಗಿದ್ದಾರೆ. 24 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನದಿಂದ ಯಶಸ್ವಿಯಾಗಬಹುದು ಎಂದು ಕೇಳಿದ್ದೇನೆ. ಜೊತೆಗೆ ದಿಲ್ಲಿ, ಚೆನ್ನೈ, ಹೈದರಾಬಾದ್ ನಗರಗಳಲ್ಲಿ ಇದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.
ಕಸದಿಂದ ಅನಿಲ ಉತ್ಪಾದನೆಗೆ ಇಳಿದಿರುವ ಅಭಿಷೇಕ್ ಅವರ ಸಂಸ್ಥೆ ಪ್ರಾಥಮಿಕವಾಗಿ 100 ಕೋಟಿ ರೂಪಾಯಿ ಬಂಡವಾಳ ಹೂಡಲಿದೆ. ಒಟ್ಟು 300 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ. ಇವರಿಗೆ ಸರಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ. ಈ ಪ್ರಯೋಗ ಯಶಸ್ವಿಯಾದರೆ ರಾಜ್ಯದಲ್ಲಿ ಇನ್ನೂ ಒಂದಷ್ಟು ಕಡೆ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ನುಡಿದರು.
ವಿದ್ಯುತ್ ಉತ್ಪಾದನೆಗೆ ಒಂದಷ್ಟು ಸಂಸ್ಥೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಅವಕಾಶ ನೀಡಲಾಗಿತ್ತು. ಆದರೆ ಅವರು ವಿದ್ಯುತ್ ಉತ್ಪಾದನೆಯಲ್ಲಿ ವಿಫಲರಾಗಿದ್ದಾರೆ. ಈಗ ಒಂದೆರಡು ಸಂಸ್ಥೆಗೆ ಹೊರತು ಪಡಿಸಿ ಮಿಕ್ಕವರನ್ನು ರದ್ದು ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸುಧಾಮದಾಸ್, ಕಾರ್ಬನ್ ಮಾಸ್ಟರ್ಸ್ ಸಂಸ್ಥೆಯ ಮುಖ್ಯಸ್ಥ ಕೆವಿನ್ ಹೌಸ್ಟನ್, ಐಐಎಸ್ಸಿಯ ಪ್ರೊ.ದಾಸಪ್ಪ, ಹಸಿರು ದಳದ ಶೇಖರ್, ಅಭಿಷೇಕ್ ಮತ್ತಿತರರು ಉಪಸ್ಥಿತರಿದ್ದರು.







