ಎಲ್ಲರಿಗೂ ಸೌಲಭ್ಯ ದೊರಕಿಸಲು ಸಮೀಕ್ಷೆ: ಡಿ.ಕೆ.ಸುರೇಶ್

ಬೆಂಗಳೂರು, ಸೆ. 29: ‘ಮೀಸಲಾತಿ ಹಾಗೂ ಎಲ್ಲ ಸರಕಾರಿ ಸೌಲಭ್ಯಗಳು ಕೇವಲ ಸಿಕ್ಕವರಿಗೇ ಸಿಗಬಾರದು. ಇದನ್ನು ಎಲ್ಲರಿಗೂ ದೊರೆಯುವಂತೆ ಮಾಡಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಳ ಪ್ರಮುಖ ಪಾತ್ರವಹಿಸುತ್ತದೆ’ ಎಂದು ಬಮುಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ವಿವರಣೆ ನೀಡಿದ್ದಾರೆ.
ಸೋಮವಾರ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಗೊಂದಲದಿಂದ ಕೂಡಿದೆ ಎನ್ನುವ ಆರೋಪಗಳನ್ನು ಗಮನಿಸುತ್ತಿದ್ದು, ನಾವು ಸೌಲಭ್ಯ ಇಲ್ಲದವರ ಸ್ಥಿತಿಗತಿಯನ್ನು ಮಾತ್ರ ನೋಡುತ್ತಿದ್ದೇವೆ. ಬಡಜನರ ಮಾಹಿತಿ ಸಂಗ್ರಹಿಸಿ ಅವರನ್ನು ಮೇಲಕ್ಕೆತ್ತಲು ಯಾವ ಕಾರ್ಯಕ್ರಮಗಳನ್ನು ಸರಕಾರ ಜಾರಿಗೆ ತರಬೇಕು ಎಂಬುದಾಗಿ ಆಲೋಚನೆ ಮಾಡಲಾಗುತ್ತದೆ. ಸಮೀಕ್ಷೆಯಿಂದ ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ನುಡಿದರು.
ಗ್ರಾಮೀಣ ಹಾಗೂ ನಗರ ಭಾಗದ ಜನರು ಇದರಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು. ಸಮೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ. ಆದರೆ, ಬಿಜೆಪಿಯವರು ಗೊಂದಲ ಮಾಡುತ್ತಿದ್ದಾರೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ. ಸಮೀಕ್ಷೆಯಲ್ಲಿ ಆಯೋಗ ಕೇಳಿರುವ ಎಲ್ಲ ಮಾಹಿತಿಗಳಿಗೆ ಉತ್ತರಿಸಬೇಕು ಎನ್ನುವುದು ಕಡ್ಡಾಯವಲ್ಲ. ಒಟ್ಟು 60 ಪ್ರಶ್ನೆಗಳನ್ನು ಕೇಳಲಾಗಿದೆ. ಅದರಲ್ಲಿ ಸಮಂಜಸವಲ್ಲದ ಪ್ರಶ್ನೆಗಳಿಗೆ ಉತ್ತರಿಸಬಹುದು, ಇರದೆಯೂ ಇರಬಹುದು ಎಂದರು.
ಸಂಬಳ, ಒಡವೆಗಳ ಮಾಹಿತಿ ಬಗ್ಗೆ ಕೇಳಲಾಗಿದೆ ಎಂದರೆ, ಬಡವರೋ ಅಥವಾ ಬಲ್ಲಿದರೋ ಎಂದು ತಿಳಿಯಲು ಈ ರೀತಿ ಮಾಡಲಾಗಿದೆ. ಚಿನ್ನ ಎಂಬುದು ಬಡವರಿಗೆ ಕನಸಿನ ಮಾತು. ಚಿನ್ನ ಇಟ್ಟಿರುವವರು ಇದರ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಹೊರತು. ಇಲ್ಲದವರು ಸುಮ್ಮನೆ ಇದ್ದಾರೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರವೂ ಜಾತಿಗಣತಿ ನಡೆಸುತ್ತೇವೆಂದು ಕರೆ ನೀಡಿದೆ. ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಎಸ್ ನಾಯಕರುಗಳು ನಾವು ಹಿಂದೂ ಜಾತಿಗೆ ಸೇರಿದವರು ಎಂದು ಅವರ ಕಾರ್ಯಕರ್ತರಿಗೆ ಕರೆ ನೀಡಲಿ. ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತಾರೆ ಎಂದಾದರೆ ‘ಹಿಂದೂ’ ಎಂದೇ ಬರೆಸಲು ಅಭಿಯಾನ ನಡೆಸಲಿ, ಒತ್ತಾಯ ಮಾಡಲಿ ಎಂದು ಹೇಳಿದರು.
‘ಜಾತಿ, ಧರ್ಮ ಒಡೆಯಲಾಗುತ್ತಿದೆ ಎಂದು ಪದೇ, ಪದೇ ಆರೋಪ ಮಾಡುತ್ತಿದ್ದಾರಲ್ಲವೇ? ಹಾಗಾದರೆ ನಾವು ಭಾರತೀಯರು, ಹಿಂದೂಗಳು ಮಾತ್ರ ಎಂದು ಹೇಳಲಿ. ಸಮೀಕ್ಷೆಯನ್ನು ವಿರೋಧ ಮಾಡುತ್ತಿರುವವರು ಹಳ್ಳಿ, ಹಳ್ಳಿಗೆ ಹೋಗಿ ಈ ಅಭಿಯಾನ ನಡೆಸಲಿ. ಮೊಬೈಲ್ ಅಪ್ಲಿಕೇಶನ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಈಗ ಅದಕ್ಕೆ ಹೊಂದಿಕೊಳ್ಳಲಾಗುತ್ತಿದೆ ಎಂದರು.







