ವಿಜ್ಞಾನ ಕೇಂದ್ರಗಳಲ್ಲಿ ‘ವಿದ್ಯಾರ್ಥಿ-ವಿಜ್ಞಾನಿ ಸಂವಾದ’; ಇಸ್ರೋ ಸಹಕಾರ ಕೋರಿದ ಸಚಿವ ಡಾ.ಅಜಯ್ ಧರಂ ಸಿಂಗ್

ಬೆಂಗಳೂರು : ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವನ್ನು ಪಠ್ಯಪುಸ್ತಕದ ಆಚೆಗೆ ಅನುಭವಾತ್ಮಕವಾಗಿ ಪರಿಚಯಿಸುವ ಉದ್ದೇಶದಿಂದ, ವಿವಿಧ ವಿಜ್ಞಾನ ಕೇಂದ್ರಗಳಲ್ಲಿ ಇಸ್ರೋ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರ ನೀಡಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರಂ ಸಿಂಗ್, ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣನ್ಗೆ ಮನವಿ ಮಾಡಿದ್ದಾರೆ.
ಬುಧವಾರ ಇಸ್ರೋ ಅಧ್ಯಕ್ಷರನ್ನು ಭೇಟಿಯಾದ ಸಂದರ್ಭದಲ್ಲಿ ಈ ಸಂಬಂಧ ಮನವಿ ಸಲ್ಲಿಸಿದ ಸಚಿವರು, ಬಾಹ್ಯಾಕಾಶ ವಿಜ್ಞಾನ, ಸಂಶೋಧನೆ, ಉಪಗ್ರಹ ತಂತ್ರಜ್ಞಾನ ಮತ್ತು ವಿಜ್ಞಾನ ವೃತ್ತಿಜೀವನದ ಬಗ್ಗೆ ವಿದ್ಯಾರ್ಥಿಗಳು ನೇರವಾಗಿ ವಿಜ್ಞಾನಿಗಳಿಂದ ತಿಳಿದುಕೊಳ್ಳುವ ವ್ಯವಸ್ಥೆ ರೂಪಿಸಬೇಕು ಎಂದು ಕೋರಿದ್ದಾರೆ.
ವಿದ್ಯಾರ್ಥಿಗಳು ವಿಜ್ಞಾನಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದಾಗ ವಿಜ್ಞಾನ ಅವರಿಗೊಂದು ಪಾಠದ ವಿಷಯವಾಗಿರದೆ, ಭವಿಷ್ಯದ ಅವಕಾಶವಾಗಿ ಕಾಣಲು ಆರಂಭಿಸುತ್ತದೆ. ಇಸ್ರೋ ವಿಜ್ಞಾನಿಗಳ ಅನುಭವ ಮತ್ತು ಸಾಧನೆಗಳು ಮಕ್ಕಳಲ್ಲಿ ಕುತೂಹಲ, ಸಂಶೋಧನಾ ಮನೋಭಾವ ಹಾಗೂ ದೊಡ್ಡ ಕನಸುಗಳನ್ನು ಹುಟ್ಟುಹಾಕಬಲ್ಲವು ಎಂದು ಅಜಯ್ ಧರಂಸಿಂಗ್ ಹೇಳಿದ್ದಾರೆ.
ಅನುಭವದ ಮೂಲಕ ಕಲಿಕೆ: ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಮತ್ತು ಸಂವಾದಾತ್ಮಕ ವಿಜ್ಞಾನ ಕಲಿಕೆಯನ್ನು ಉತ್ತೇಜಿಸಲು ರಾಜ್ಯ ಸರಕಾರ ವಿಜ್ಞಾನ ಕೇಂದ್ರಗಳು, ಮೊಬೈಲ್ ಪ್ಲಾನೆಟೋರಿಯಂಗಳು ಹಾಗೂ ದೂರದರ್ಶಕ ಆಧಾರಿತ ಕಾರ್ಯಕ್ರಮಗಳನ್ನು ವಿಸ್ತರಿಸುತ್ತಿದೆ. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೊಬೈಲ್ ಡಿಜಿಟಲ್ ಪ್ಲಾನೆಟೋರಿಯಂ ಕಾರ್ಯಕ್ರಮವು 3,282ಶಾಲೆಗಳನ್ನು ತಲುಪಿದ್ದು, 5.46 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರ ಪ್ರಯೋಜನ ಪಡೆದಿದ್ದಾರೆ.
ವಿಜ್ಞಾನವನ್ನು ಮಕ್ಕಳಿಗೆ ತೋರಿಸಬೇಕು, ಅನುಭವಿಸಬೇಕು, ಪ್ರಶ್ನಿಸಲು ಅವಕಾಶ ಕೊಡಬೇಕು. ವಿಜ್ಞಾನಿಗಳೊಂದಿಗೆ ನೇರ ಸಂವಾದವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜೊತೆಗೆ ಮುಂದಿನ ಪೀಳಿಗೆಯ ವಿಜ್ಞಾನಿಗಳು, ಸಂಶೋಧಕರು ಮತ್ತು ತಂತ್ರಜ್ಞಾನ ತಜ್ಞರನ್ನು ರೂಪಿಸಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.






