ಯುವ ಸಬಲೀಕರಣ-ಕ್ರೀಡಾ ಇಲಾಖೆ ಹೆಸರು ಶೀಘ್ರದಲ್ಲಿಯೇ ಬದಲಾವಣೆ : ಡಾ.ಪರಮೇಶ್ವರ್

ಬೆಂಗಳೂರು : ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹೆಸರನ್ನು ಬದಲಾವಣೆ ಮಾಡಿ ಶೀಘ್ರದಲ್ಲಿಯೇ ಕ್ರೀಡಾ, ಯುವ ಸಬಲೀಕರಣ ಮತ್ತು ನಾಗರಿಕ ವಿಮಾನಯಾನ ಇಲಾಖೆ ಎಂದು ನಾಮಕರಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ನಗರದ ಜಕ್ಕೂರು ಸರಕಾರಿ ವಿಮಾನ ಚಾಲನಾ ತರಬೇತಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಚಟುವಟಿಕೆಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ರೀಡಾ, ಯುವ ಸಬಲೀಕರಣ ಮತ್ತು ನಾಗರಿಕ ವಿಮಾನಯಾನ ಇಲಾಖೆ ಎಂದು ಹೆಸರನ್ನು ಬದಲಾಯಿಸಲು ಈಗಾಗಲೇ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜ್ಯ ಸರಕಾರಕೆಕ ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ.ಈ ಸಂಬಂಧ ಶೀಘ್ರದಲ್ಲಿಯೇ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಬದಲಾವಣೆ ಮಾಡಲಾಗುವುದು ಎಂದರು.
ಜಕ್ಕೂರಿನಲ್ಲಿ ಸರಕಾರಿ ವಿಮಾನ ಚಾಲನಾ ತರಬೇತಿ ಶಾಲೆಯು 1940ರಲ್ಲಿ ಪ್ರಾರಂಭವಾಗಿದ್ದು, ಈವರೆಗೆ ಸಾವಿರಾರು ಪೈಲಟ್ಗಳನ್ನು ತಯಾರು ಮಾಡಲಾಗಿದೆ. ಅವರೆಲ್ಲರೂ ಕೂಡ ಇಂದು ಏರ್ ಇಂಡಿಯಾ ಅಥವಾ ಬೇರೆ ಬೇರೆ ಏರ್ಲೈನ್ಸ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪೈಲಟ್ ಆಗಬೇಕು ಎಂಬ ಕನಸು ಕಟ್ಟಿಕೊಂಡಿರುವ ಮಧ್ಯಮ ವರ್ಗದ ಮತ್ತು ಬಡ ಮಕ್ಕಳಿಗೆ ಈ ಸಂಸ್ಥೆಯು ವರದಾನವಾಗಿದೆ. ಸರಕಾರ ಈ ತರಬೇತಿ ಸಂಸ್ಥೆಯನ್ನು ಉಳಿಸಿ, ಬೆಳೆಸಿಕೊಂಡು ಇಲ್ಲಿಯವರೆಗೆ ಬಂದಿದೆ ಎಂದು ಹೇಳಿದರು.
ಪ್ರಸ್ತುತವಾಗಿ ಈ ಸಂಸ್ಥೆಯಲ್ಲಿ 5 ಏರ್ ಕ್ರಾಫ್ಟ್ ಗಳಿವೆ. ಹೊಸದಾಗಿ 2 ಏರ್ ಕ್ರಾಫ್ಟ್ ಗಳನ್ನು ಕೊಂಡುಕೊಳ್ಳಲು ಖರೀದಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ಸಿಕ್ಕ ತಕ್ಷಣ ಖರೀದಿಸಲಾಗುವುದು. ಖಾಸಗಿ ಪೈಲಟ್ ಪರವಾನಗಿ ಪಡೆದುಕೊಳ್ಳಲು 40 ಗಂಟೆ ಚಾಲನೆ ಮಾಡಿರಬೇಕು. ಜೊತೆಗೆ ಕಮರ್ಷಿಯಲ್ ಪೈಲಟ್ ಪರವಾನಗಿ ಪಡೆಯಲು 180 ಗಂಟೆ ಚಾಲನೆ ಮಾಡಿರಬೇಕು. ಇಷ್ಟೆ ಲ್ಲ ಅರ್ಹತೆಗಳು ವಿಮಾನ ಚಾಲನೆ ನಡೆಸಲು ಬೇಕಾಗಿರುತ್ತದೆ. ಇದಕ್ಕೆ ಪೂರಕವಾಗಿ ಈ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದರು.
ಇಂಡಿಯಾದಲ್ಲಿ ಏರ್ ಕಂಪೆನಿ ಸೇರಿ 850 ಏರ್ ಕ್ರಾಫ್ಟ್ ಪ್ರತಿನಿತ್ಯ ಹಾರಾಟ ನಡೆಸುತ್ತದೆ. ಇದರಲ್ಲಿ 7 ರಿಂದ 8 ಸಾವಿರ ಪೈಲಟ್ಗಳು ಕೆಲಸ ಮಾಡುತ್ತಿದ್ದಾರೆ. ಇಂಡಿಗೋ ಕಂಪೆನಿಯವರು 5 ವರ್ಷದೊಳಗಾಗಿ ಹೆಚ್ಚಿನ ಏರ್ ಕ್ರಾಫ್ಟ್ ಗಳ ಖರೀದಿಗೆ ತೀರ್ಮಾನಿಸಿದ್ದಾರೆ. ಹೀಗಿರುವಾಗ ದೇಶದಲ್ಲಿ ಅಂದಾಜು ಸುಮಾರು 35 ಸಾವಿರ ಪೈಲಟ್ಗಳ ಅವಶ್ಯಕತೆ ಬೀಳುತ್ತದೆ. ಹೀಗಾಗಿ ಉದ್ಯೋಗ ಸಿಗುವ ಭರವಸೆ ಇರುವುದರಿಂದ ಪೈಲಟ್ ಆಗಲು ಆಸಕ್ತಿ ಇರುವವರಿಗೆ ಹೆಚ್ಚಿನ ತರಬೇತಿಯನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಇದೇ ವೇಳೆ ಪೋಲ್ ವಾಲ್ಟ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಆಯ್ಕೆಯಾಗಿರುವ ಸಿಂಧುಶ್ರೀ ಗಣೇಶ್ ಅವರಿಗೆ ಡಾ.ಜಿ.ಪರಮೇಶ್ವರ್ ಅವರು ಅಂತರರಾಷ್ಟ್ರೀಯ ಗುಣಮಟ್ಟದ 3 ಪೋಲ್ಗಳನ್ನು ವಿತರಿಸಿ, ಶುಭಹಾರೈಸಿದರು. ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ಎಂ.ಎನ್.ಅನುಚೇತ್, ಒಕ್ಕೂರು ವಿಮಾನಯಾನ ತರಬೇತಿ ಶಾಲೆಯ ನಿರ್ದೇಶಕ ಬಸವರಾಜ್ ಸೇರಿದಂತೆ ಪ್ರಮುಖರಿದ್ದರು.






