ಸಣ್ಣ ಉದ್ಯಮ ಹೂಡಿಕೆಗೆ ಆಸರೆಯಾದ ಗೃಹ ಲಕ್ಷ್ಮೀ ಯೋಜನೆ : ಡಾ.ಶಾಲಿನಿ ರಜನೀಶ್

ಬೆಂಗಳೂರು : ಮಹಿಳಾ ಉದ್ಯಮಿಗಳು ಸಣ್ಣ ಉದ್ಯಮ ಹೂಡಿಕೆಗೆ ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹ ಲಕ್ಷ್ಮೀ ಯೋಜನೆ ಆಸರೆಯಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದ್ದಾರೆ.
ಶನಿವಾರ ನಗರದ ಪ್ರೆಸ್ಟೀಜ್ ಟವರ್ಸ್ನಲ್ಲಿ ಎಫ್ಐಸಿಸಿಐ ಮತ್ತು ಯುಕೆ ಅಂಡ್ ಕೋ ಜಂಟಿಯಾಗಿ ಆಯೋಜಿಸಿದ್ದ ಭಾರತ ಕುಟುಂಬ ಉದ್ಯಮ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ರಾಜ್ಯ ಸರಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ, ಕುಟುಂಬದ ಯಜಮಾನಿಯರಾದ 2 ಕೋಟಿಗೂ ಹೆಚ್ಚು ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆಯಡಿ ತಿಂಗಳಿಗೆ 2,000 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇದು ಸಣ್ಣ ಉದ್ಯಮಗಳಿಗೆ ಬಂಡವಾಳದ ಆಧಾರವಾಗುತ್ತಿದೆ ಎಂದರು.
3 ರಿಂದ 4 ಮಹಿಳೆಯರು ಸೇರಿ 'ಜಂಟಿ ಹೊಣೆಗಾರಿಕೆ ಗುಂಪು' (ಜೆಎಲ್ಜಿ) ರಚಿಸಿಕೊಂಡರೆ ಯಾವುದೇ ಬ್ಯಾಂಕ್ ಮೇಲಾಧಾರ ಇಲ್ಲದೆ ಸಾಲ ಸೌಲಭ್ಯ ದೊರೆಯಲಿದೆ. ಜತೆಗೆ ಉಚಿತ ಸಾರ್ವಜನಿಕ ಸಾರಿಗೆ ಸೌಲಭ್ಯವು ಮಹಿಳೆಯರ ವ್ಯಾಪಾರ-ವಹಿವಾಟಿನ ಸಂಚಾರಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಉದ್ಯಮಿಗಳು ಆತ್ಮವಿಶ್ವಾಸದಿಂದ ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಅವರು ನುಡಿದರು.
ಎಂಎಸ್ಎಂಇ: ಕರ್ನಾಟಕದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕುಟುಂಬ ಉದ್ಯಮಗಳು ರಾಜ್ಯದ ಆರ್ಥಿಕ ಪ್ರಗತಿಯ ಚಾಲಕ ಶಕ್ತಿಯಾಗಿದ್ದು, ಪ್ರಸ್ತುತ 50 ಲಕ್ಷ ನೋಂದಾಯಿತ ಎಂಎಸ್ಎಂಇಗಳು 2.3 ಕೋಟಿ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ. ರಾಜ್ಯದಲ್ಲಿರುವ ಎಂಎಸ್ಎಂಇಗಳು ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ ಶೇ. 8.30ರಷ್ಟು ಕೊಡುಗೆ ನೀಡುತ್ತಿವೆ. ಉತ್ಪಾದನಾ ವಲಯದ ಶೇ.45ರಷ್ಟು ಹಾಗೂ ಒಟ್ಟು ರಫ್ತಿನ ಶೇ.40ರಷ್ಟು ಕೊಡುಗೆ ಈ ವಲಯದಿಂದಲೇ ಬರುತ್ತಿದೆ. ದೇಶದ ದೊಡ್ಡ ಕಂಪೆನಿಗಳ ಬೇರುಗಳು ಕುಟುಂಬ ಆಧಾರಿತ ಸಣ್ಣ ಉದ್ಯಮಗಳಲ್ಲೇ ಇವೆ ಎಂದು ಹೇಳಿದರು.
ಕೈಗಾರಿಕಾ ಮತ್ತು ಸೇವಾ ವಲಯಗಳ ಸಮೀಕ್ಷೆಯಲ್ಲಿ ಭಾಗವಹಿಸಿದ ಬಹುಪಾಲು ಉದ್ಯಮಿಗಳು ರಾಜ್ಯ ಸರಕಾರದ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಣ್ಣ ಉದ್ಯಮಗಳಲ್ಲಿ ಪ್ರತಿಭಾ ಸಂಪನ್ಮೂಲ ಬಲಪಡಿಸುವುದು ಮತ್ತು ಸರಕಾರ ಯೋಜನೆಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಶಿಫಾರಸುಗಳನ್ನು ಸರಕಾರ ಸ್ವಾಗತಿಸಿದೆ ಎಂದೂ ಅವರು ಉಲ್ಲೇಖಿಸಿದರು.






