ಸ್ವಸಹಾಯ ಗುಂಪುಗಳಿಂದ ಸ್ತ್ರೀ ಸಬಲೀಕರಣ ಸಾಧ್ಯ: ಆಯುಕ್ತೆ ಡಾ.ಶಾಲಿನಿ ರಜನೀಶ್
ಬೆಂಗಳೂರು: ಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆಯಿಂದ ಮಹಿಳಾ ಸಬಲೀಕರಣ ಸಾಧ್ಯ ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತೆ ಡಾ.ಶಾಲಿನಿ ರಜನೀಶ್ ತಿಳಿಸಿದರು.
ಶುಕ್ರವಾರ ನಗರದ ಸಫೀನಾ ಫ್ಲಾಜಾದಲ್ಲಿ ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್, ಸ್ಮಾಲ್ ಫಾಮರ್ಸ್ ಅಗ್ರಿ ಬಿಜಿನೆಸ್ ಕನ್ಸಾರ್ಷಿಯಮ್ ಹಾಗೂ ನಬಾರ್ಡ್ ಸಹಯೋಗದಲ್ಲಿ ಮಾ.1ರಿಂದ 3ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ‘ತರಂಗ್’ ಕರಕುಶಲ ಕೈಮಗ್ಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಅಭಿವೃದ್ಧಿಯನ್ನು ನಾವು ವೇಗವಾಗಿ ಎಲ್ಲರನ್ನೊಳಗೊಂಡಂತೆ ಮಾಡಬೇಕು. ಅದರಲ್ಲಿಯೂ ಮಹಿಳೆಯರು ಸಶಕ್ತೀಕರಣಗೊಂಡರೆ ದೇಶವೇ ಏಳಿಗೆಯಾದಂತೆ. ರಾಜ್ಯದಲ್ಲಿ ಸುಮಾರು 2 ಕೋಟಿ ಹೆಣ್ಣು ಮಕ್ಕಳಿದ್ದು, 5 ಲಕ್ಷ ಸ್ತ್ರೀಶಕ್ತಿ ಗುಂಪುಗಳಿವೆ. ಅದರಲ್ಲಿ ನಮಗೆ ಕಾಣಸಿಗುವುದು ಸುಮಾರು 2 ರಿಂದ 3 ಸಾವಿರ ಗುಂಪುಗಳು ಮತ್ತು ಈ ಸ್ತ್ರೀಶಕ್ತಿ ಗುಂಪುಗಳು ಆರ್ಥಿಕವಾಗಿ ಇನ್ನೂ ಪೂರ್ಣವಾಗಿ ಸಬಲೀಕರಣಗೊಂಡಿಲ್ಲ.
ಇವರಿಗೆ ತಮ್ಮ ಪ್ರದೇಶದಲ್ಲಿ ಮಾರುಕಟ್ಟೆ ಕಲ್ಪಿಸಲು ಸರಕಾರ ಎಲ್ಲ ಗ್ರಾ.ಪಂ.ಗಳಲ್ಲಿ ಮಹಿಳಾ ಉತ್ಪಾದಕ ಮಾರುಕಟ್ಟೆ ನಿರ್ಮಿಸಲು ಸಜ್ಜಾಗಿದೆ. ಇನ್ನು ಒಂದು ವರ್ಷದಲ್ಲಿ ಇದು ಪೂರ್ಣಗೊಳ್ಳುತ್ತದೆ. ಅವರು ಮಾಹಿತಿ ತಂತ್ರಜ್ಞಾನ, ಇ-ವಾಣಿಜ್ಯ ಬಳಕೆಯಲ್ಲಿಯೂ ತರಬೇತಿ ನೀಡಿ ಆನ್ಲೈನ್ ಮಾರುಕಟ್ಟೆಗೆ ಪ್ರೋತ್ಸಾಹ ನೀಡಬೇಕೆಂದರು. ಕೃಷಿ ಉತ್ಪನ್ನ, ಕರಕುಶಲ ವಸ್ತುಗಳು, ಕೈಮಗ್ಗ ವಸ್ತುಗಳು, ಆಹಾರ ಪದಾರ್ಥಗಳು, ಸಿರಿಧಾನ್ಯ ಹೀಗೆ ಹಲವು ವಿಭಾಗಗಳಲ್ಲಿ ಮಹಿಳೆಯರು ವ್ಯಾಪಾರ ವಹಿವಾಟು ನಡೆಸಬಹುದು ಎಂದರು.
ಕೃಷಿಕರ ಮಾರುಕಟ್ಟೆಯನ್ನು ಹೆಚ್ಚು ಮಾಡಲು ಮಾರುಕಟ್ಟೆ ವೃದ್ಧಿಸಬೇಕು. ಸರಕಾರವು ಮಹಿಳಾ ಸಶಕ್ತೀಕರಣಕ್ಕೆ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರ ಜೀವನಮಟ್ಟ ಸುಧಾರಿಸಿ ಪ್ರಗತಿಯತ್ತ ರಾಜ್ಯ ಮುಂದುವರೆಯುವುದೇ ನಮ್ಮ ನಿರೀಕ್ಷೆಯಾಗಿದೆ ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.
ನಬಾರ್ಡ್ ಚೀಫ್ ಜನರಲ್ ಮ್ಯಾನೇಜರ್ ರಮೇಶ್ ಮಾತನಾಡಿ, ನಬಾರ್ಡ್ ವತಿಯಿಂದ ‘ಸ್ವಾವಲಂಬಿ ಸಖಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಧಾರವಾಡ, ಹುಬ್ಬಳ್ಳಿಯಲ್ಲಿನ ಸ್ತ್ರೀಶಕ್ತಿ ಗುಂಪುಗಳು ವರ್ಷಕ್ಕೆ ಸುಮಾರು 50 ಲಕ್ಷಕ್ಕೂ ಹೆಚ್ಚು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ ಎಂದರು.
ಗ್ರಾಮೀಣ ಮಹಿಳಾ ಯಶೋಗಾಥೆಗಳನ್ನು ಬಣ್ಣಿಸುವ ‘ಇನ್ ಹರ್ ಸ್ಟೈಡ್’ ಕಿರುಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು. ಅಲ್ಲದೆ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರೈತ ಉತ್ಪಾದನಾ ಸಂಘಟನೆ-ಇನ್ನಿತರ ಮಹಿಳಾ ಸಾಧಕರಿಗೆ ಸನ್ಮಾನಿಸಲಾಯಿತು.
ಈ ಮೇಳ ಮಾ.1ರಿಂದ 3ರ ವರೆಗೆ ಸಫೀನಾ ಪ್ಲಾಜಾದಲ್ಲಿ ಬೆಳಗ್ಗೆ 11ಗಂಟೆಯಿಂದ ರಾತ್ರಿ 9ರ ವರೆಗೆ ಇರುತ್ತದೆ. ತರಂಗ್ ಕರಕುಶಲ ಮೇಳದ 42 ಮಳಿಗೆಗಳಲ್ಲಿ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳು, ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವಿದೆ. ಸಮಾರಂಭದಲ್ಲಿ ನ್ಯಾಬ್ಫಿನ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ.ದಿವಾಕರ್ ಹೆಗಡೆ, ಎಸ್ಎಲ್ಬಿ ಸಂಚಾಲಕ ಎಂ.ಭಾಸ್ಕರ್ ಚಕ್ರವರ್ತಿ ಉಪಸ್ಥಿತರಿದ್ದರು.