‘ಪುನರ್ ರಚಿತ ಐಕೆಎಫ್ ಮೊದಲ ಸಭೆ’: ಕೈಗಾರಿಕಾ ಪಾರ್ಕ್ ಗಳ ಸ್ಥಾಪನೆಗೆ ಉದ್ಯಮಿ ಸಜ್ಜನ್ ಜಿಂದಾಲ್ ಸಲಹೆ
ಬೆಂಗಳೂರು: ವಿಮಾನ ನಿಲ್ದಾಣಗಳಿಂದ ಸುಮಾರು 2 ಗಂಟೆ ರಸ್ತೆ ಪ್ರಯಾಣದ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಕೈಗಾರಿಕಾ ಪಾರ್ಕ್ ಗಳನ್ನು ಸ್ಥಾಪಿಸಿದರೆ ಹೆಚ್ಚಿನ ಹೂಡಿಕೆ ಸೆಳೆಯಲು ಅನುಕೂಲವಾಗುತ್ತದೆ ಎಂದು ಇನ್ವೆಸ್ಟ್ ಕರ್ನಾಟಕ ಫೋರಂ (ಐಕೆಎಫ್) ಸಹ-ಅಧ್ಯಕ್ಷರಾದ ಉದ್ಯಮಿ ಸಜ್ಜನ್ ಜಿಂದಾಲ್ ಸಲಹೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಐಕೆಎಫ್ ಪುನರ್ ರಚನೆ ನಂತರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಆನ್ಲೈನ್ ಮೂಲಕ ಪಾಲ್ಗೊಂಡು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣಗಳಿಗೆ ಹತ್ತಿರವಿರುವ ಪ್ರದೇಶಗಳನ್ಜು ಗುರುತಿಸಿ ಕೈಗಾರಿಕಾ ಪಾರ್ಕ್ ಗಳನ್ನು ಸ್ಥಾಪಿಸುವುದು ಸೂಕ್ತ. ಕರ್ನಾಟಕದಲ್ಲಿ ನೆಲೆಸಿರುವ ಒಬ್ಬ ಉದ್ಯಮಿಯಾಗಿ ಈ ರಾಜ್ಯ ಹೂಡಿಕೆ ಮಾಡಲು ಎಷ್ಟು ಸೂಕ್ತ ಎಂಬುದು ನನಗೆ ಚೆನ್ನಾಗಿ ಗೊತ್ತು. ಇಲ್ಲಿನ, ಕಾರ್ಯಪರಿಸರವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯಶಸ್ವಿ ಉದ್ದಿಮೆಗಳನ್ನು ಕಟ್ಟಬಹುದು ಎಂದು ಸಜ್ಜನ್ ಜಿಂದಾಲ್ ತಿಳಿಸಿದರು.
ಸಜ್ಜನ್ ಅವರ ಈ ಸಲಹೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಸುಮಾರು 5-10 ಸಾವಿರ ಎಕರೆಗಳಲ್ಲಿ ಇಂತಹ ಕೈಗಾರಿಕಾ ಪಾರ್ಕ್ ಗಳನ್ನು ಸ್ಥಾಪಿಸುವ ಉದ್ದೇಶ ಸರಕಾರಕ್ಕೂ ಇದೆ. ಈ ಪಾರ್ಕ್ ಗಳಲ್ಲಿ ಉದ್ದಿಮೆ ಸ್ಥಾಪನೆಗೆ ಅನುಕೂಲವಾಗುವಂತೆ ಪ್ಲಗ್-ಇನ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಮೇಲೆ ಸುಮಾರು 55 ಸಾವಿರ ಕೋಟಿ ರೂಪಾಯಿಯ ಹೂಡಿಕೆ ಖಾತರಿಯಾಗಿದೆ. ಉಳಿದಂತೆ 40 ಸಾವಿರ ಕೋಟಿಯಿಂದ 1 ಲಕ್ಷ ಕೋಟಿ ರೂಪಾಯಿವರೆಗಿನ ಹಲವು ಪ್ರಸ್ತಾವಗಳು ಬೇರೆ ಬೇರೆ ಹಂತದ ಪ್ರಕ್ರಿಯೆಯಲ್ಲಿವೆ ಎಂದು ಅವರು ಹೇಳಿದರು.
ಪುನರ್ ರಚಿತ ಐಕೆಎಫ್ ನಲ್ಲಿ ವಲಯಧಾರಿತ ಉಪಸಮಿತಿಗಳನ್ನು ರಚಿಸಿ ಹೂಡಿಕೆ ಆಕರ್ಷಿಸಲು ಒತ್ತು ನೀಡುವುದಕ್ಕೂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಕಳೆದ ಆರು ತಿಂಗಳಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಅವಲೋಕಿಸುವ ಜೊತೆಗೆ ಮುಂದೆ ಇಡಬೇಕಾದ ಹೆಜ್ಜೆಗಳ ಬಗ್ಗೆಯೂ ಸಮಾಲೋಚಿಸಲಾಯಿತು.
ಐಕೆಎಫ್ ನಿರ್ದೇಶಕರಾದ ಕಿರ್ಲೊಸ್ಕರ್ ಸಿಸ್ಟೆಮ್ಸ್ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್, ಕೆನ್ನಮೆಟಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕೃಷ್ಣನ್ ವೆಂಕಟೇಶನ್ ಸಭೆಯಲ್ಲಿದ್ದರು. ಮತ್ತೊಬ್ಬ ನಿರ್ದೇಶಕ, ನೆಟ್ವಕ್ರ್ಸ್ ಸಹ ಸ್ಥಾಪಕ ಅಂಕಿತ್ ಫತೇಪುರಿಯ ಆನ್ಲೈನ್ ಮೂಲಕ ಪಾಲ್ಗೊಂಡಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಮುಖ್ಯ ನಿರ್ವಹಣಾಧಿಕಾರಿ ಸಿ.ಟಿ.ಮುದ್ದುಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.